ಹೊಸದುರ್ಗ: ‘ರೈತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪೌತಿಖಾತೆ ಬದಲಾವಣೆ ಆಂದೋಲನ ಮಾಡಿಕೊಂಡು ಬರುತ್ತಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ’ ಎಂದು ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.
ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಪೌತಿಖಾತೆ ಬದಲಾವಣೆ ಆದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಒಂದು ವರ್ಷದ ಹಿಂದಿನಿಂದಲೂ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕಿನಲ್ಲಿ ಪೌತಿಖಾತೆ ಬದಲಾವಣೆ ಆಂದೋಲನ ಮಾಡಿಕೊಂಡು ಬರಲಾಗುತ್ತಿದೆ. ಈಗಾಗಲೇ 20 ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಪೌತಿ ಆಗಿರುವ ರೈತರ ಮರಣ ಪ್ರಮಾಣಪತ್ರ ಇರದಿದ್ದರೂ ಗ್ರಾಮ ಮಹಜರ್, ವಂಶವೃಕ್ಷ, ಅಫಿಡವಿಟ್ ಮೂಲಕ ಪೌತಿಖಾತೆ ಮಾಡಿಕೊಡಲಾಗುತ್ತಿದೆ. ಈ ಆಂದೋಲನದ ಮೂಲಕ ತಾಲ್ಲೂಕಿನ 2,000ಕ್ಕೂ ಹೆಚ್ಚು ರೈತರಿಗೆ ಪೌತಿಖಾತೆ ಬದಲಾವಣೆಯ ಪಹಣಿ ನೀಡಲಾಗಿದೆ. ನಮ್ಮ ಕಾರ್ಯ ಮಾದರಿಯಾಗಿದ್ದು, ಈಗ ಸರ್ಕಾರ ರಾಜ್ಯದೆಲ್ಲೆಡೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್, ‘ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅನುಕೂಲ ಆಗುವಂತಹ ಇಂತಹ ಕಾರ್ಯಕ್ರಮವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ, ಅವರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ವೈ. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಕೆ.ಒ. ಜಾನಕಿರಾಮ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್. ಈಶ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ದಿವಾಕರ್, ಸಿಡಿಪಿಒ ಪವಿತ್ರಾ, ಮುಖಂಡರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ತುಂಬಿನಕೆರೆ ಬಸವರಾಜು, ಪವಿತ್ರಾ ನಾಗರಾಜು, ಐನಹಳ್ಳಿ ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.