ADVERTISEMENT

ಭರಮಸಾಗರ: ಅತ್ಯಂತ ಹೀನಾಯ ಕೃತ್ಯ ಎಸಗಿದ ಆರೋಪಿಯ ಸ್ಥಳ ಮಹಜರು, ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:23 IST
Last Updated 28 ಜುಲೈ 2021, 6:23 IST
ಭರಮಸಾಗರ ಹೋಬಳಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹಿಡಿದು ಮಹಜರಿಗಾಗಿ ಗ್ರಾಮದ ಆರೋಪಿಯ ಮನೆಗೆ ಕರೆತರುತ್ತಿರುವುದು.
ಭರಮಸಾಗರ ಹೋಬಳಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹಿಡಿದು ಮಹಜರಿಗಾಗಿ ಗ್ರಾಮದ ಆರೋಪಿಯ ಮನೆಗೆ ಕರೆತರುತ್ತಿರುವುದು.   

ಭರಮಸಾಗರ: ಅತ್ಯಂತ ಹೀನಾಯ ಕೃತ್ಯ ಎಸಗಿದ ಆರೋಪಿಯನ್ನು ಸ್ಥಳ ಮಹಜರು ಮಾಡಲು ಗ್ರಾಮಕ್ಕೆ ಕರೆತಂದಾಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಇಡೀ ಘಟನೆ ಜಾತಿ ಕಲಹದ ತಿರುವು ಪಡೆಯುವ ಸುಳಿವು ಪೊಲೀಸರಿಗೆ ಲಭ್ಯವಾಗಿತ್ತು. ಹೀಗಾಗಿ, ಜುಲೈ 23ರಿಂದಲೇ ಗ್ರಾಮಕ್ಕೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಗ್ರಾಮದ ಪ್ರತಿ ಬೀದಿಯ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಾಣುತ್ತಿದ್ದರು.

ಆರೋಪಿಯನ್ನು ಗ್ರಾಮಕ್ಕೆ ಕರೆತರುವ ಮಾಹಿತಿ ಅರಿತು ಸುತ್ತಮುತ್ತಲಿನ ಗ್ರಾಮಗಳ ಜನರು ಮಂಗಳವಾರ ಧಾವಿಸಿದ್ದರು. ನಿರೀಕ್ಷೆ ಮೀರಿ ಜನರು ಸೇರಿದ್ದರಿಂದ ಪೊಲೀಸರು ಆರೋಪಿ ಕರೆತರಲು ಹಿಂದೇಟು ಹಾಕಿದರು. ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಮನೆಯ ಬಳಿಗೆ ಕರೆತಂದು ಮಹಜರು ಮಾಡಿದರು. ಆರೋಪಿಯ ಮನೆಯಲ್ಲಿ ಅವಿತು ಇಟ್ಟಿದ್ದ ಕೊಳೆಯಾದ ಬಟ್ಟೆಯನ್ನು ವಶಕ್ಕೆ ಪಡೆದರು.

ADVERTISEMENT

ಈ ವೇಳೆ ಸಂತ್ರಸ್ತ ಬಾಲಕಿಯ ಕುಟುಂಬ ಹಾಗೂ ಸಂಬಂಧಿಕರು ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನರ ಕೈಗೆ ಆರೋಪಿ ಒಪ್ಪಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ಮತ್ತೊಂದೆಡೆ ಆರೋಪಿಯ ಕುಟುಂಬ ಹಾಗೂ ಸಂಬಂಧಿಕರೂ ಇದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಬೀಸುವ ಅನಿವಾರ್ಯತೆ ಎದುರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.