ಹಿರಿಯೂರು: ಉಪ್ಪಾರ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಬುಧವಾರ ತಾಲ್ಲೂಕು ಉಪ್ಪಾರ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಗರದ ಪ್ರಧಾನ ರಸ್ತೆಯಲ್ಲಿರುವ ರಂಜಿತ್ ಹೋಟೆಲ್ ವೃತ್ತದಲ್ಲಿ ಸೇರಿದ ಉಪ್ಪಾರರು ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಸುವಂತೆ ಘೋಷಣೆ
ಕೂಗಿದರು.
ರಾಜ್ಯದಲ್ಲಿ ಸುಮಾರು 52 ಲಕ್ಷಕ್ಕೂ ಹೆಚ್ಚು ಉಪ್ಪಾರರಿದ್ದು, ಕನಿಷ್ಠ ಸೌಲಭ್ಯಗಳೂ ಇಲ್ಲದೆ ಗುಡಿಸಲುಗಳಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಉಪ್ಪನ್ನು ತಯಾರಿಸಿ ಬದುಕು ಸಾಗಿಸುತ್ತಿದ್ದ ಜನಾಂಗ ಬೃಹತ್ ಕೈಗಾರಿಕೆಗಳ ದಾಳಿಯಿಂದ ಕುಲಕಸುಬಿನಿಂದ ದೂರ ಉಳಿಯಬೇಕಾಯಿತು. ಹೊಟ್ಟೆಪಾಡಿಗಾಗಿ ಬೇರೆ ಬೇರೆ ವೃತ್ತಿಗಳನ್ನು ನಡೆಸುತ್ತ ರಾಜ್ಯದಾದ್ಯಂತ ಸುತ್ತುತ್ತಿದ್ದಾರೆ. ಅತ್ಯಂತ ಹಿಂದುಳಿದ ಉಪ್ಪಾರರು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಅನಿವಾರ್ಯವಾಗಿದೆ. ಆದ್ದರಿಂದ ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ, ಕರಿಯಾಲಪ್ಪ, ಮಸ್ಕಲ್ ನಾಗರಾಜ್, ಬಬ್ಬೂರು ಏಕಾಂತಪ್ಪ, ವಿ.ಎಲ್.ಗೌಡ, ನಿವೃತ್ತ ಪ್ರಾಧ್ಯಾಪಕ ಶರಣಪ್ಪ, ಆಲೂರು ಕನಕದಾಸ್, ನಿಂಗರಾಜ್ ಉಪ್ಪಾರ, ಶೇಖರಪ್ಪ, ಮಹಲಿಂಗಪ್ಪ, ಹಳದಪ್ಪ, ನೀಲಕಂಠಪ್ಪ, ಕರಿಯಪ್ಪ, ಶ್ರೀನಿವಾಸ್, ಚನ್ನಕೇಶವ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.