ಚಿತ್ರದುರ್ಗ: ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ವಿ.ವಿ.ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಜಲಸಂಪನ್ಮೂಲ ಇಲಾಖೆ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಆದೇಶಿಸಿದೆ.
ನೂತನ ಆದೇಶದ ಪ್ರಕಾರ ಅ.15ರವರೆಗೆ ನೀರು ಹರಿಯಲಿದೆ. ಭದ್ರಾ ಮೇಲ್ದಂಡೆಯ ಮುಖ್ಯ ಕಾಲುವೆ, ಹೆಬ್ಬೂರು ಹಳ್ಳ ಹಾಗೂ ವೇದಾವತಿ ನದಿಯ ಮೂಲಕ ಹರಿಯುವ ನೀರು ವಿ.ವಿ.ಸಾಗರ ಜಲಾಶಯ ಸೇರಲಿದೆ.
ಭದ್ರಾ ಜಲಾಶಯದಿಂದ ವಿ.ವಿ.ಸಾಗರ ಜಲಾಶಯಕ್ಕೆ ನೀರು ಹರಿಸಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಚರ್ಚಿಸಿದ ಜಲಸಂಪನ್ಮೂಲ ಇಲಾಖೆ ನೀರು ಹರಿಸಲು ಅನುಮತಿ ನೀಡಿದೆ. ಬುಧವಾರದಿಂದಲೇ ನಾಲೆಗೆ ನೀರು ಬಿಡುವ ಸಾಧ್ಯತೆ ಇದೆ.
ಈ ನಡುವೆ ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಎ.ಎಸ್.ಗೇಲ್ ಅವರು ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವ ಭಾಗವಾಗಿ ಈ ಭೇಟಿ ನಿಗದಿಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಜುಲೈ 9ರಂದು ಬೆಂಗಳೂರಿಗೆ ಬರುವ ಆಯುಕ್ತರು ಬಳಿಕ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ. ಜುಲೈ 10, 11 ಹಾಗೂ 12ರಂದು ಕಾಮಗಾರಿ ವೀಕ್ಷಣೆ, ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವರು. ಬಳಿಕ ದೆಹಲಿಗೆ ಮರಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.