ADVERTISEMENT

ಮೆಕ್ಕೆಜೋಳಕ್ಕೆ ಯೂರಿಯಾ ಕೊಡಿ; ಅಂಗಲಾಚುತ್ತಿರುವ ರೈತರು

ಕಾಯಿ ಕಟ್ಟುವ ಹಂತದ ಬೆಳೆ ಸಿಕೊಳ್ಳಲು ರೈತರ ಪರದಾಟ; ಸೊಸೈಟಿಗಳ ಎದುರು ಸರತಿ ಸಾಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:08 IST
Last Updated 29 ಜುಲೈ 2025, 6:08 IST
ಹೊಳಲ್ಕೆರೆಯ ಸೊಸೈಟಿಯಲ್ಲಿ ಸೋಮವಾರ ಯೂರಿಯಾ ಖರೀದಿಗೆ ಮುಗಿಬಿದ್ದ ರೈತರು
ಹೊಳಲ್ಕೆರೆಯ ಸೊಸೈಟಿಯಲ್ಲಿ ಸೋಮವಾರ ಯೂರಿಯಾ ಖರೀದಿಗೆ ಮುಗಿಬಿದ್ದ ರೈತರು   

ಚಿತ್ರದುರ್ಗ: ಕಾಯಿ ಕಟ್ಟುವ ಹಂತ ತಲುಪಿರುವ ಬೆಳೆ ಉಳಿಸಿಕೊಳ್ಳಲು ರೈತರು ಯೂರಿಯಾಕ್ಕಾಗಿ ಮೊರೆ ಇಡುತ್ತಿದ್ದಾರೆ. ವಿವಿಧೆಡೆ ಸೊಸೈಟಿಗಳ ಎದುರು ರೈತರು ಸಾಲುಗಟ್ಟಿ ನಿಲ್ಲುತ್ತಿದ್ದು, ರಸಗೊಬ್ಬರಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ.

ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಪೈರು ವಡೆಯುವ ಹಂತಕ್ಕೆ ಬಂದಿದೆ. 80,671 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಕಳೆದೊಂದು ವಾರದಿಂದ ಮಳೆ ಸುರಿಯುತ್ತಿರುವ ಕಾರಣ ಮೆಕ್ಕೆಜೋಳ ಪೈರಿಗೆ ಯೂರಿಯಾ ಹಾಕಿ ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆ ರೈತರ ಮುಂದಿದೆ. ಕೇವಲ 2 ತಾಲ್ಲೂಕಿನ ರೈತರಿಗೆ ಅವಶ್ಯಕವಾದ ಯೂರಿಯಾ ಪೂರೈಸಲು ಕೃಷಿ ಇಲಾಖೆಗೆ ಆಗದಿರುವುದು ರೈತರನ್ನು ಕಂಗೆಡಿಸಿದೆ.

ತಾಲ್ಲೂಕಿನ ಕಸಬಾ, ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ಇದೆ. ರಾಷ್ಟ್ರೀಯ ಹೆದ್ದಾರಿ–13ರ ವ್ಯಾಪ್ತಿಯ ಮುದ್ದಾಪುರ, ಚಿಕ್ಕಗೊಂಡನಹಳ್ಳಿ, ಚಿಕ್ಕಪ್ಪನಹಳ್ಳಿ ಭಾಗದಲ್ಲಿ ಮಳೆಯಾಗಿದ್ದು ಮೆಕ್ಕೆಜೋಳಕ್ಕೆ ಯೂರಿಯಾ ಹಾಕುತ್ತಿದ್ದಾರೆ. ಹೊಳಲ್ಕೆರೆ ವ್ಯಾಪ್ತಿಯ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಅವರಿಗೂ ಯೂರಿಯಾ ಅವಶ್ಯಕತೆ ಇದೆ.

ADVERTISEMENT

ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ಭಾಗದಲ್ಲಿ ಮಳೆ ಕೊರತೆಯಾಗಿದ್ದು ಬರದ ಭೀತಿ ಎದುರಾಗಿದೆ. ಶೇಂಗಾ ಬಿತ್ತನೆಗೆ ಈಗ ಯೂರಿಯಾ ಅವಶ್ಯಕತೆ ಇಲ್ಲ. ಅಲ್ಲಿಯ ರೈತರಿಗೆ ಈಗ ಬೇಕಿರುವುದು ವರುಣನ ಕೃಪೆ ಮಾತ್ರ. ಹೊಸದುರ್ಗ ಭಾಗದಲ್ಲೂ ಉತ್ತಮ ಮಳೆಯಾಗಿದ್ದು ರೈತರು ರಾಗಿ, ಸಿರಿಧಾನ್ಯ ಬಿತ್ತನೆ ಮಾಡಿದ್ದಾರೆ. ಇಲ್ಲೂ ಯೂರಿಯಾಕ್ಕೆ ಅಷ್ಟೊಂದು ಬೇಡಿಕೆ ಇಲ್ಲ.

ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿಗೆ ಮಾತ್ರ ಯೂರಿಯಾ ಅವಶ್ಯಕತೆ ಇದ್ದು ಅವರಿಗೆ ಬೇಕಾದ ರಸಗೊಬ್ಬರ ಪೂರೈಸಲು ಇಲಾಖೆಯಿಂದ ಆಗುತ್ತಿಲ್ಲವೇ ಎಂದು ರೈತರು ಪ್ರಶ್ನಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ಕಚ್ಚಾಟದಿಂದಾಗಿ ಬಡ ರೈತರು ನಷ್ಟ ಭೀತಿ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಳೆದೊಂದು ವಾರದಿಂದ ಬೆಳಿಗ್ಗೆ 5 ಗಂಟೆಯಿಂದಲೇ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರೈತರು ಸೊಸೈಟಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪ್ರತಿ ರೈತರಿಗೆ 2 ಚೀಲ ಮಾತ್ರ ವಿತರಿಸುತ್ತಿರುವ ಕಾರಣ ಬೆಳೆಗಳಿಗೆ ಬೇಕಾಗುವಷ್ಟು ಗೊಬ್ಬರ ಸಿಗದಾಗಿದೆ. ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮುತ್ತಿಗೆ ಭಯದಿಂದಾಗಿ ಕೃಷಿ ಇಲಾಖೆ ಕಚೇರಿಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಒಂದೇ ದಿನ 500 ಟನ್‌ ವಿತರಣೆ: ಹೊಳಲ್ಕೆರೆ ತಾಲ್ಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮೆಕ್ಕೆಜೋಳ ಕೆಲವು ಕಡೆ ಸೂಲಂಗಿ ಹೊಡೆಯುವ ಹಂತದಲ್ಲಿದೆ. ರೈತರು ಈ ಬೆಳೆಗೆ ಈಗಾಗಲೇ 2 ಬಾರಿ ಯೂರಿಯಾ ಹಾಕಿದ್ದಾರೆ. ತಡವಾಗಿ ಬಿತ್ತನೆ ಮಾಡಿದ ಕಸಬಾ, ರಾಮಗಿರಿ ಹಾಗೂ ತಾಳ್ಯ ಹೋಬಳಿಗಳಲ್ಲಿ ಮೆಕ್ಕೆಜೋಳಕ್ಕೆ ಯೂರಿಯಾ ಹಾಕಲಾಗುತ್ತಿದೆ.

8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ನಡೆಯುತ್ತಿದ್ದು ಯೂರಿಯಾ ಅಗತ್ಯವಿದೆ. ರೈತರಿಗೆ ಇನ್ನೂ ಒಂದು ತಿಂಗಳು 500 ಟನ್ ಯೂರಿಯಾ ಬೇಕಾಗಿದೆ. ಅವಶ್ಯಕತೆ ಇರುವ ಸಂದರ್ಭದಲ್ಲಿ ಯೂರಿಯಾ ಸಿಗದ ಕಾರಣ ರೈತರು ಸೊಸೈಟಿಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. 

‘ಸೋಮವಾರ ಒಂದೇ ದಿನ 200 ಟನ್ ಯೂರಿಯಾ ವಿತರಿಸಲಾಗಿದೆ.  ಬೇರೆ ತಾಲ್ಲೂಕುಗಳಲ್ಲಿ ಯೂರಿಯಾ ಕೊರತೆ ಆಗಿರುವುದರಿಂದ ಅಲ್ಲಿನ ರೈತರು ನಮ್ಮ ತಾಲ್ಲೂಕಿಗೆ ಬರುತ್ತಿದ್ದು, ಸ್ವಲ್ಪ ಬೇಡಿಕೆ ಹೆಚ್ಚಾಗಿದೆ. ಎಲ್ಲರಿಗೂ ಯೂರಿಯಾ ಸಿಗಲಿ ಎಂದು ರೈತರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಯೂರಿಯಾ ವಿತರಿಸಲಾಗಿದೆ. ರೈತರ ಆಧಾರ್ ಕಾರ್ಡ್ ಪರಿಶೀಲಿಸಿ ಸೀಮಿತವಾಗಿ ಯೂರಿಯಾ ವಿತರಿಸಲು ನಿರ್ದೇಶನ ನೀಡಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಭರಮಸಾಗರದಲ್ಲಿ ಮುಗಿಬಿದ್ದ ಜನ: ಭರಮಸಾಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಯೂರಿಯಾ ಗೊಬ್ಬರದ ದಾಸ್ತಾನು ಬಂದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಸಹಕಾರ ಸಂಘದ ಮುಂದೆ ಮುಗಿಬಿದ್ದರು.

ಕೃಷಿ ಸಹಕಾರ ಸಂಘದ ವ್ಯಾಪ್ತಿಗೆ ಬಾರದ ನೀರ್ಥಡಿ, ಹಂಪನೂರು, ಬಹದ್ದೂರುಗಟ್ಟ, ಕೊಳಹಾಳ್‌, ಬಿಳಿಚೋಡು, ಪಲ್ಲಾಗಟ್ಟೆ ಕಡೆಯಿಂದಲೂ ರೈತರು ಬಂದಿದ್ದರು. ಮಹಿಳೆಯರು ಮತ್ತು ಶಾಲಾ ಮಕ್ಕಳು ಸಹ ಯೂರಿಯಾ ಪಡೆಯುವ ಸರದಿ ಸಾಲಿನಲ್ಲಿ ನಿಂತು ಕಾಣಿಸಿಕೊಂಡಿದ್ದರು.

‘ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೇವಲ 400 ಚೀಲ ರಸಗೊಬ್ಬರ ಮಾತ್ರ ಬಂದಿದ್ದು ಅದನ್ನು ಮೊದಲು ಬಂದವರ ಆದ್ಯತೆ ಪರಿಗಣಿಸಿ ವಿತರಣೆ ಮಾಡಲಾಗಿದೆ’ ಎಂದು ಸಹಕಾರ ಸಂಘದ ಪದಾಧಿಕಾರಿಗಳು ತಿಳಿಸಿದರು.

‘ಮುಂಗಾರು ಹಂಗಾಮಿಗೂ ಮುನ್ನವೇ ನಾವು 200 ಟನ್‌ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಆದರೆ ನಮಗೆ ಈ ಬಾರಿ ಕೇವಲ 20 ಟನ್‌ ಗೊಬ್ಬರ ಸರಬರಾಜು ಮಾಡಲಾಗಿದೆ’ ಎಂದು ಸಂಘದ ಶಮೀಮ್‌ ಮತ್ತು ಮಂಜುನಾಥ್‌ ತಿಳಿಸಿದರು.

ರೈತರು ಕೃಷಿ ಸಹಕಾರ ಸಂಘದ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ ಸೂಕ್ತ ವಿತರಣೆ ವ್ಯವಸ್ಥೆಯನ್ನು ಕೋರಿ ಭರಮಸಾಗರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದರು. ಭರಮಸಾಗರ ಸುತ್ತ ನಾಲ್ಕಾರು ಕೃಷಿ ಪ್ರಾಥಮಿಕ ಸಹಕಾರ ಸಂಘಗಳು ಇದ್ದು, ಅಲ್ಲಿಯೂ ಯೂರಿಯಾ ದಾಸ್ತಾನು ಇಲ್ಲದಂತಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಚಿಕ್ಕಜಾಜೂರು ಸಮೀಪದ ಆಡನೂರು ಗ್ರಾಮದಲ್ಲಿ ರಸ್ತೆಯಲ್ಲೇ ಯೂರಿಯಾ ಇಳಿಸಿಕೊಳ್ಳುತ್ತಿರುವ ರೈತರು
ಸೋಮವಾರ ಒಂದೇ ದಿನ 600 ಟನ್‌ ಯೂರಿಯಾ ವಿತರಿಸಿದ್ದೇವೆ. ಮಂಗಳವಾರ 100 ಟನ್‌ ವಿತರಣೆಯಾಗಲಿದೆ. ಹಂತಹಂತವಾಗಿ ಇನ್ನೂ 2000 ಟನ್‌ ಯೂರಿಯಾ ಬರಲಿದೆ
ಬಿ.ಮಂಜುನಾಥ್‌ ಜಂಟಿ ಕೃಷಿ ನಿರ್ದೇಶಕ

ರಸ್ತೆಯಲ್ಲೇ ಗೊಬ್ಬರ ಪಡೆದರು

ಚಿಕ್ಕಜಾಜೂರು ಸಮೀಪದ ಆಡನೂರು ಗ್ರಾಮದ ಸೊಸೈಟಿಗೆ ಸೋಮವಾರ ಯೂರಿಯಾ ಹೊತ್ತ ಲಾರಿ ಬರುತ್ತಿದ್ದಂತೆ ರೈತರು ಮುಗಿಬಿದ್ದರು. ಮಳೆಯಿಂದ ರಸ್ತೆ ಗುಂಡಿಯಾಗಿದ್ದ ಕಾರಣ ಸೊಸೈಟಿಗೆ ತೆರಳುವ ಮುನ್ನವೇ ಲಾರಿಯನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ ಯೂರಿಯಾ ಪಡೆದರು. ಮಧ್ಯಾಹ್ನ 3 ಗಂಟೆಗೆ ಯೂರಿಯಾ ಬರುತ್ತದೆ ಎಂಬ ಮಾಹಿತಿ ಪಡೆದ ರೈತರು ಸೊಸೈಟಿಗೆ ತೆರಳಿ ಹೆಸರು ನೋಂದಾಯಿಸಿ ಹಣ ಪಾವತಿ ಮಾಡಿ ರಸೀದಿ ಪಡೆದರು. ಲಾರಿ ಬಂದ ನಂತರ ರೈತರು ರಶೀದಿ ತೋರಿಸಿ ಗೊಬ್ಬರದ ಮೂಟೆಗಳನ್ನು ಇಳಿಸಿಕೊಂಡರು. ತಾವು ತಂದಿದ್ದ ಆಟೋ ಮತ್ತಿತರ ವಾಹನಗಳಲ್ಲಿ ತುಂಬಿಕೊಂಡು ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.