ಮೊಳಕಾಲ್ಮುರು: ಬೇರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ದೇಶದಲ್ಲಿ ರೂಪಾಂತರ ಕೋವಿಡ್ ಸೋಂಕಿನ ಪ್ರಕರಣಗಳು ಸಂಪೂರ್ಣ ಹತೋಟಿಯಲ್ಲಿದೆ. ಕಡ್ಡಾಯ ಲಸಿಕೆ ಪಡೆಯುವ ಮೂಲಕ ನಿರ್ಮೂಲನೆಗೆ ಇನ್ನಷ್ಟು ಸಹಕರಿಸಬೇಕು ಎಂದು ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 33 ಪ್ರೌಢಶಾಲೆಗಳಲ್ಲಿ 2998, 6 ಪದವಿಪೂರ್ವ ಕಾಲೇಜುಗಳಲ್ಲಿ 1889, ಮತ್ತು ಐಟಿಐ ಕಾಲೇಜಿನಲ್ಲಿ 41 ವಿದ್ಯಾರ್ಥಿಗಳು ಸೇರಿದಂತೆ 15-18 ವರ್ಷದೊಳಗಿನ ಒಟ್ಟು 5125 ಮಂದಿಗೆ ಲಸಿಕೆ ಹಾಕಬೇಕಿದೆ. ಪೋಷಕರು ಮೂಢ
ನಂಬಿಕೆಗಳಿಗೆ, ಗಾಳಿ ಮಾತುಗಳಿಗೆ ಕಿವಿಗೊಡದೇ ಲಸಿಕೆ ಹಾಕಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ವೈದ್ಯಾಧಿಕಾರಿ ಡಾ. ಮಧುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕೆ.ಇ. ಜಾನಕಿರಾಮ್, ಪ್ರಾಂಶುಪಾಲ ಗೋವಿಂದಪ್ಪ, ಉಪ ಪ್ರಾಚಾರ್ಯ ಸುರೇಂದ್ರನಾಥ್, ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಡಾ. ರಾಘವೇಂದ್ರ, ಕಲ್ಲೇಶಪ್ಪ, ರಂಗಾ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.