ADVERTISEMENT

ಚಿತ್ರದುರ್ಗ | ವದ್ದೀಗೆರೆ: ಸಂಭ್ರಮದ ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 4:36 IST
Last Updated 19 ಏಪ್ರಿಲ್ 2022, 4:36 IST
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ (ಕಾಲಭೈರವೇಶ್ವರ)ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ (ಕಾಲಭೈರವೇಶ್ವರ)ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.   

ಹಿರಿಯೂರು: ತಾಲ್ಲೂಕಿನ ಸುಕ್ಷೇತ್ರ ವದ್ದೀಗೆರೆಯ ಸಿದ್ದೇಶ್ವರಸ್ವಾಮಿ (ಕಾಲಭೈರವೇಶ್ವರ ಸ್ವಾಮಿ) ಬ್ರಹ್ಮ ರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಧ್ಯಾಹ್ನ ಹೂವಿನ ಪ್ಲಲಕ್ಕಿ ಉತ್ಸವ, ಜನಪದ ಕಲಾವಿದರನ್ನು ಒಳಗೊಂಡ ವೈವಿಧ್ಯಮಯ ಮೆರವಣಿಗೆ ನಂತರ ಸಂಜೆ 5.30ಕ್ಕೆ ಬ್ರಹ್ಮರಥೋತ್ಸವ ನಡೆಯಿತು.

‘ಸಿದ್ದಪ್ಪನ (ಸಿದ್ದೇಶ್ವರಸ್ವಾಮಿ) ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆ. ಹಿಂದೆ ಈ ಪ್ರದೇಶದಲ್ಲಿ ವದ್ದಿಮೆಳೆ (ಬಿದಿರುಮೆಳೆ) ಯಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣ ವದ್ದೀಗೆರೆ ಎಂಬ ಹೆಸರು ಬಂದಿರಬಹುದು, ಸಿದ್ದಪ್ಪ ಈ ಮೆಳೆಗಳಲ್ಲೇ ವಾಸವಾಗಿದ್ದ’ ಎಂದು ಹಿರಿಯರು ಹೇಳುತ್ತಾರೆ.

ADVERTISEMENT

ಮನೆಗಳಲ್ಲಿ ಚೇಳು ಕಾಣಿಸಿಕೊಂಡವರು ಸಿದ್ದಪ್ಪನಿಗೆ ಹರಕೆ ಹೊತ್ತು, ರಥೋತ್ಸವದ ದಿನ ಹರಕೆ ತೀರಿಸುವುದು ವಾಡಿಕೆ. ಚೇಳು ಕಾಣಿಸಿಕೊಂಡಾಗ ಸಿದ್ದಪ್ಪನನ್ನು ಸ್ಮರಿಸಿದಲ್ಲಿ ಅವು ಕಣ್ಮರೆಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ವದ್ದೀಗೆರೆ ಸಿದ್ದೇಶ್ವರ ಸ್ವಾಮಿ ರಥೋತ್ಸವದ ಜಾಗದಲ್ಲಿ ಭೀಮಸಮುದ್ರದ ಗ್ರಾಮಸ್ಥರು 20 ಸಾವಿರ ಮಜ್ಜಿಗೆ ಪಾಕೆಟ್‌ಗಳನ್ನು ಭಕ್ತರಿಗೆ ಹಂಚಿದರು. ಸೊಂಡೆಕೆರೆ ಗ್ರಾಮದ ಕನಕ ವೃತ್ತದಲ್ಲಿ ಗ್ರಾಮಸ್ಥರು ಜಾತ್ರೆಗೆ ಬರುವ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿದರು.

ರಥೋತ್ಸವದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಪ್ರವರ್ಗ–1ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ಕಾಂಗ್ರೆಸ್ ಮುಖಂಡ ಮಾಗಡಿ ಜಯರಾಮಯ್ಯ, ತಹಶೀಲ್ದಾರ್ ಶಿವಕುಮಾರ್ ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.