
ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ಸೋಮವಾರ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.
ಶಾಸಕ ಟಿ.ರಘುಮೂರ್ತಿ, ವಾಲ್ಮೀಕಿ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ‘ವಾಲ್ಮೀಕಿ ರಾಮಾಯಣ ಮಾನವ ಬದುಕಿನ ವಿಕಾಸದ ಚರಿತ್ರೆಯಾಗಿದೆ. ಜಗತ್ತಿಗೆ ಶ್ರೇಷ್ಠ ಕಾವ್ಯವನ್ನು ನೀಡಿದ ವಾಲ್ಮೀಕಿ ಬಲು ದೊಡ್ಡ ಸಂಸ್ಕೃತಿಯನ್ನು ಸೃಷ್ಟಿಸಿದ್ದಾರೆ. ಎಲ್ಲರೂ ವಾಲ್ಮೀಕಿ ರಾಮಾಯಣವನ್ನು ಅಧ್ಯಯನ ಮಾಡಬೇಕು. ಅವರು ನೀಡಿರುವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ರಾಮಾಯಣ ಮಹಾಕಾವ್ಯದ ಮೂಲಕ ವಾಲ್ಮೀಕಿ ಮಹಾಕವಿಯು ಇಡೀ ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ಸಂದೇಶ ನೀಡಿದ್ದಾರೆ. ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ’ ಎಂದರು.
ಹಲವು ಬಗೆಯ ಹೂವುಗಳಿಂದ ಅಲಂಕರಿಸಿದ ವಾಲ್ಮೀಕಿ ಭಾವಚಿತ್ರವನ್ನು ತಮಟೆ, ಉರುಮೆ, ಡ್ರಮ್ಸೆಟ್, ಡೊಳ್ಳು ಮುಂತಾದ ಜನಪದ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾರೋಟದ ಮೂಲಕ ಮೆರವಣಿಗೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್, ಸದಸ್ಯ ನಾಗಭೂಷಣ, ಜಗಲೂರಸ್ವಾಮಿ, ರವಿ, ಓಬಳೇಶ್, ನಿಜಲಿಂಗಪ್ಪ, ಪ್ರಕಾಶ್, ಗ್ರಾಮದ ಮುಖಂಡ ವಾಲ್ಮೀಕಿ, ರಮೇಶ್, ಕೃಷ್ಣಪ್ಪ, ಚಿತ್ತಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.