ಹಿರಿಯೂರು:ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದ್ದು, ರೈತರು, ಸಾರ್ವಜನಿಕರಲ್ಲಿ ಸಂತಸ ಮೂಡಿದೆ.
2011ರಲ್ಲಿ ಜಲಾಶಯದ ನೀರಿನ ಮಟ್ಟ 106.50 ಅಡಿ ಇತ್ತು. ಎಂಟು ವರ್ಷಗಳ ನಂತರ ವರುಣನ ಕೃಪೆ ಹಾಗೂ ಭದ್ರಾ ಮೇಲ್ದಂಡೆಯ ತಾತ್ಕಾಲಿಕ ವ್ಯವಸ್ಥೆ ಮೂಲಕ ನೀರಿನ ಮಟ್ಟ 100 ಅಡಿ ದಾಟಿದೆ. 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಟ್ಟು 11.15 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇದರಲ್ಲಿ ಈ ವರ್ಷ ಬಂದಿರುವ ನೀರಿನ ಪ್ರಮಾಣ 9.28 ಟಿಎಂಸಿ ಅಡಿ. ಜಲಾಶಯ ಭರ್ತಿಯಾಗಲು ಇನ್ನೂ 18.85 ಟಿಎಂಸಿ ಅಡಿ ನೀರು ಬರಬೇಕಿದೆ.
ಒಡೆದುಹೋಗಿದ್ದ ಕೆಲ್ಲೋಡು ಬ್ಯಾರೇಜ್ ದುರಸ್ತಿ ಕಾರಣ ನ. 19ರಿಂದ ಡಿ. 1ರ ವರೆಗೆ ಜಲಾಶಯಕ್ಕೆ ಒಳಹರಿವು ಇರಲಿಲ್ಲ. ನ. 19ರಂದು ನೀರಿನ ಮಟ್ಟ 98.15 ಅಡಿ ಇತ್ತು. ಡಿ. 2ರಿಂದ 11ರವರೆಗೆ 1.85 ಅಡಿ ನೀರು ಬಂದಿದೆ. ಪ್ರಸ್ತುತ ಒಳಹರಿವು 421 ಕ್ಯುಸೆಕ್ಗೆ ಇಳಿದಿದೆ. ಮಾರ್ಚ್ 31ರ ವರೆಗೆ ಭದ್ರಾ ಯೋಜನೆಯ ಪಂಪ್ಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದಲ್ಲಿ ಇನ್ನೂ ಆರೇಳು ಅಡಿ ನೀರು ಬರಬಹುದು ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.