ಚಿತ್ರದುರ್ಗ: ನಾಲ್ಕು ದಶಕದವರೆಗೂ ಜಿಲ್ಲೆಯ ಅಭಿವೃದ್ಧಿ ವಿಚಾರದ ಹೋರಾಟಗಳಲ್ಲಿ ಮುರುಘಾರಾಜೇಂದ್ರ ಒಡೆಯರ್ ಸದಾ ಬದ್ಧರಾಗಿದ್ದರು ಎಂದು ಚಿಂತಕ ಯಾದವರೆಡ್ಡಿ ಹೇಳಿದರು.
ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮುರುಘಾರಾಜೇಂದ್ರ ಒಡೆಯರ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ, ವೈದ್ಯಕೀಯ ಕಾಲೇಜು ಸೇರಿ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ’ ಎಂದು ಸ್ಮರಿಸಿಕೊಂಡರು.
‘ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಸ್ಥಳೀಯ ರಾಜಕಾರಣ ನಿತ್ರಾಣಗೊಂಡಿದೆ. ಅದಕ್ಕಾಗಿ ಯುವಸಮೂಹ ನಾಯಕತ್ವ ಬೆಳೆಸಿಕೊಳ್ಳಬೇಕಿದೆ. ಹೋರಾಟಗಳನ್ನೇ ಹತ್ತಿಕ್ಕುವಂಥ ಪ್ರಸ್ತುತ ದಿನಗಳಲ್ಲಿ ತಪ್ಪು ನಿರ್ಧಾರಗಳನ್ನು ಖಂಡಿಸುವ, ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ವಕೀಲ ಬಿ.ಕೆ.ರಹಮತ್ ಉಲ್ಲಾ, ‘ಹೋರಾಟಕ್ಕೆ ಒಡೆಯರ್ ಸ್ಫೂರ್ತಿಯಾಗಿದ್ದಾರೆ. ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರ ಮೇಲೆ ಎಲ್ಲಿಯೇ ದೌರ್ಜನ್ಯ, ಅನ್ಯಾಯವಾದರೂ ಸಹಿಸುತ್ತಿರಲಿಲ್ಲ. ಹೋರಾಟಕ್ಕೆ ಮುಂದಾಗುತ್ತಿದ್ದರು’ ಎಂದು ನೆನಪಿಸಿಕೊಂಡರು.
ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಫಾದರ್ ಎಂ.ಎಸ್.ರಾಜು, ಹೋರಾಟಗಾರ್ತಿ ಜಯಲಕ್ಷ್ಮಿ, ವಿಮುಕ್ತಿ ವಿದ್ಯಾಸಂಸ್ಥೆಯ ಆರ್. ವಿಶ್ವಸಾಗರ್, ಕುಂಚಿಗನಹಾಳ್ ಮಹಾಲಿಂಗಪ್ಪ, ವೈ.ಕುಮಾರ್, ಕೆ.ಎಂ. ನಾಗರಾಜ್, ನರೇನಹಳ್ಳಿ ಅರುಣ್ಕುಮಾರ್, ಲಿಂಗರಾಜು, ಫೈಲ್ವಾನ್ ತಿಪ್ಪೇಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.