ADVERTISEMENT

ವಿವಿ ಸಾಗರ: ಯದುವೀರ ಒಡೆಯರ್‌ ಬಾಗಿನ ಸಮರ್ಪಣೆ ನಾಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 13:36 IST
Last Updated 20 ಜನವರಿ 2025, 13:36 IST
ಹಿರಿಯೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಎನ್. ಆರ್. ಲಕ್ಷ್ಮೀಕಾಂತ್ ಮಾತನಾಡಿದರು
ಹಿರಿಯೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಎನ್. ಆರ್. ಲಕ್ಷ್ಮೀಕಾಂತ್ ಮಾತನಾಡಿದರು    

ಹಿರಿಯೂರು: ಸಂಸದ ಯದುವೀರ ಶ್ರೀಕೃಷ್ಣದತ್ತ ಒಡೆಯರ್ ಅವರು ಜ. 21ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಸಮರ್ಪಿಸಲು ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್ ಹೇಳಿದರು.

ಬಾಗಿನ ಸಮರ್ಪಣೆ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಅಣೆಕಟ್ಟೆ ನಿರ್ಮಾಣಗೊಂಡ ನಂತರ ಮೂರನೇ ಬಾರಿಗೆ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದ್ದು ಯದುವೀರರು ಬಾಗಿನ ಸಮರ್ಪಣೆಗೆ ಬರಲಿದ್ದಾರೆ. 21ರಂದು ಬೆಳಿಗ್ಗೆ 10.30ಕ್ಕೆ ನಗರಕ್ಕೆ ಆಗಮಿಸಲಿರುವ ಯದುವೀರ ಒಡೆಯರ್ ಅವರನ್ನು ರಂಜಿತ್ ಹೋಟೆಲ್ ವೃತ್ತದ ಸಮೀಪ ಸ್ವಾಗತಿಸಲಾಗುವುದು ಎಂದು ಹೇಳಿದರು.

ADVERTISEMENT

ಕೆಎಸ್‌ಆರ್‌ಟಿಸಿ ನಿಲ್ದಾಣದ ಸಮೀಪ ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಿರಿಯೂರು– ಹೊಸದುರ್ಗ ರಸ್ತೆ ಮಾರ್ಗದಲ್ಲಿ ವಾಣಿವಿಲಾಸ ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಣೆ ಮಾಡಿ ಗಂಗಾಪೂಜೆ ನೆರವೇರಿಸಲಾಗುವುದು. ಮಧ್ಯಾಹ್ನ 1.30ಕ್ಕೆ ಹಿರಿಯೂರಿನ ವೇದಾವತಿ ಬಡಾವಣೆಯ ದಲಿತ ಕಾಲೊನಿಯಲ್ಲಿ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ತಾಲ್ಲೂಕು ಘಟಕದ ಮಂಡಲ ಅಧ್ಯಕ್ಷ ವಿ.ವಿಶ್ವನಾಥ್, ಮುಖಂಡರಾದ ಎಂ.ಎಸ್.ರಾಘವೇಂದ್ರ, ಎಂ.ವಿ.ಹರ್ಷ, ಎಚ್.ವೆಂಕಟೇಶ್, ಎ.ರಾಘವೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.