ಮಂಗಳೂರು: `ದೇಶ ಕಂಡ ಅತ್ಯುತ್ತಮ ಸಂಸದೀಯ ಪಟು ಬಾಬು ಜಗಜೀವನರಾಂ. ಹಸಿರು ಕ್ರಾಂತಿಯ ಹರಿಕಾರರಾದ ಅವರು ರಕ್ಷಣಾ ಮಂತ್ರಿಯಾಗಿ ಸಾಧಿಸಿದ ಸಾಧನೆಯೂ ಗಮನೀಯ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಬಾಬು ಜಗಜೀನವ ರಾಂ ಅವರ 105ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಜೀವನದಲ್ಲಿ ಕಾರ್ಮಿಕ ಸಚಿವರಾಗಿ, ರಕ್ಷಣಾ ಮಂತ್ರಿಯಾಗಿ ದೇಶವನ್ನು ಸ್ವಾವಲಂಬಿಯಾಗಿ ಮಾಡುವುದರಲ್ಲಿ ಅವರ ಕೊಡುಗೆ ಅನನ್ಯ ಎಂದು ಹೇಳಿದ ಭಟ್, ಬಳಿಕ ಉಪಪ್ರಧಾನಿಯಾಗಿ, ಶೋಷಿತ ವರ್ಗದವರ ಒಳಿತಿಗಾಗಿ ಕೈಗೊಂಡ ಕ್ರಮಗಳಿಂದಾಗಿ ಜನಮಾನಸದಲ್ಲಿ ಬಾಬೂಜಿ ತಮ್ಮ ಛಾಪನ್ನು ಒತ್ತಿದರು ಎಂದರು.
`ಇಂದು ನಾವು ಹಿಂದುಳಿದ ವರ್ಗದವರ ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ ಎಂದರು.ಮಂಗಳೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ವಿಶೇಷ ಅನುದಾನ 4 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ~ ಎಂದು ಯೋಗೀಶ್ ಭಟ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳ ಜನ್ಮದಿನಾಚರಣೆಗಳು ಅವರ ಮೇರು ವ್ಯಕ್ತಿತ್ವ ಅರಿಯಲು ಸಹಕಾರಿಯಾಗುತ್ತದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ ಎಂದರು. ಶಾಸಕ ಯು.ಟಿ.ಖಾದರ್, ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಅವರೂ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಧನಲಕ್ಷ್ಮಿ, ಪಾಲಿಕೆ ಉಪಮೇಯರ್ ಅಮಿತಕಲಾ ಇದ್ದರು.
ಮುಖ್ಯ ಭಾಷಣಕಾರರಾಗಿದ್ದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ವೈ.ಶಿವರಾಮಯ್ಯ ಮಾತನಾಡಿ, ದೇಶಕ್ಕಾಗಿ, ಇಲ್ಲಿನ ಸಾಮಾಜಿಕ ಸಮಾನತೆಗೆ ದುಡಿದವರ ತ್ಯಾಗ, ಬಲಿದಾನಗಳನ್ನು ಸ್ಮರಿಸಲು ಹಾಗೂ ಒಳಿತನ್ನು ಪಾಲಿಸಲು ಜನ್ಮದಿನಾಚರಣೆಗಳನ್ನು ಆಚರಿಸಬೇಕು ಎಂದರು.
ಜಗಜೀವನರಾಂ ಅವರ ವಿದ್ಯಾರ್ಥಿ ಜೀವನ, ಭಾಷಾ ಪಾಂಡಿತ್ಯ, ರಾಜಕೀಯ ಜೀವನದಲ್ಲಿ ವಹಿಸಿದ ಜವಾಬ್ದಾರಿಗಳು, ನಿಭಾಯಿಸಿದ ರೀತಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪರಿಸ್ಥಿತಿ ಯೊಂದಿಗೆ ರಾಜಿ ಮಾಡಿಕೊಳ್ಳದ ಅವರ ವ್ಯಕ್ತಿತ್ವ, ರಕ್ಷಣಾ ವಲಯ, ಕೃಷಿ ಕಾರ್ಮಿಕ ವಲಯಕ್ಕೆ ಕೊಡುಗೆ ಬಗ್ಗೆ ವಿವರಿಸಿದರು.
ಜಿಲ್ಲಾಧಿಕಾರಿ ಎನ್.ಎಸ್ ಚನ್ನಪ್ಪಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ವಿಜಯಪ್ರಕಾಶ್, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೊ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.