ADVERTISEMENT

ಅಜ್ಜಾವರ: ಜನಪ್ರತಿನಿಧಿ, ಪೋಷಕರ ಸಭೆಯಲ್ಲಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 11:10 IST
Last Updated 20 ಜುಲೈ 2013, 11:10 IST

ಸುಳ್ಯ: ಅಜ್ಜಾವರ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಮೇಲಿನ ಆರೋಪ ಹಾಗೂ ಅವರ ವರ್ಗಾವಣೆಯ ಪ್ರಕರಣದ ಸಂಬಂಧಪಟ್ಟು ಜು.18ರಂದು ಅಜ್ಜಾವರ ಶಾಲೆಯಲ್ಲಿ ಜನಪ್ರತಿನಿಧಿಗಳ, ಎಸ್.ಡಿ.ಎಂ.ಸಿ ಹಾಗೂ ಊರ ಪ್ರಮುಖರ ಸಭೆ ನಡೆದಿದ್ದು, ಬಿಸಿ ಬಿಸಿ ಚರ್ಚೆ ನಡೆದು ವಾಗ್ವಾದವುಂಟಾಯಿತು.

ಸಭೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭಾಗವಹಿಸಿರಲಿಲ್ಲ. ಶಾಲೆಯ ಒಳಗೆ ಮುಗಿಸಬಹುದಾಗಿದ್ದ ಈ ಸಮಸ್ಯೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರು ದೊಡ್ಡ ವಿಷಯವನ್ನಾಗಿಸಿದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಯಾವುದೇ ಸಮಸ್ಯೆಗಳಿದ್ದರೂ ಸಭೆ ನಡೆಸಿ, ಮಾತುಕತೆ ನಡೆಸಿ ಇತ್ಯರ್ಥಪಡಿಸಲು ತೀರ್ಮಾನಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ವರ್ಗಾವಣೆಗೊಂಡ ಅಧ್ಯಾಪಕರ ಪರವಾಗಿ ಘೋಷಣೆ ಕೂಗಿ ಅದೇ ಶಿಕ್ಷಕರು ಬೇಕು' ಎಂದು ಒತ್ತಾಯಿಸಿದ ಘಟನೆಯೂ ನಡೆಯಿತು. ಸೇರಿದ ಪೋಷಕರ ಮಧ್ಯೆ ಪರ-ವಿರೋಧ ಬಿಸಿ ಚರ್ಚೆ ನಡೆದು ಮುಂದೆ ಪೋಷಕರ ಅಧಿಕೃತ ಸಭೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದೆಂದು ನಿರ್ಣಯಿಸಲಾಯಿತು.

ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಮಾಜಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಸದಸ್ಯರಾದ ಚಂದ್ರಶೇಖರ ಅತ್ಯಾಡಿ, ಹಸೈನಾರ್ ಗೋರಡ್ಕ, ಕಮಲಾಕ್ಷ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೂಪಾನಂದ, ಬಯಂಬು ಭಾಸ್ಕರ್ ರಾವ್, ಇಬ್ರಾಹಿಂ ಕೊಳಂಬೆ, ದಯಾಳನ್, ವಿಘ್ನೇಶ್ವರ ಹಾಗೂ ಕೆಲ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಊರವರು ಭಾಗವಹಿಸಿದ್ದರು.

ಈ ಮಧ್ಯೆ ಆರೋಪದ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಕ ಬಾಲಕೃಷ್ಣ ನಾಯ್ಕರನ್ನು ತಾತ್ಕಾಲಿಕ ನೆಲೆಯಲ್ಲಿ ಜಟ್ಟಿಪಳ್ಳ ಶಾಲೆಗೆ ನಿಯೋಜನೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.