ADVERTISEMENT

ಅಧಿಕಾರಿ ಗೈರು; ಗೊಂದಲದಲ್ಲೇ ಮುಗಿದ ಸಭೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:35 IST
Last Updated 25 ಮಾರ್ಚ್ 2011, 7:35 IST

ಸುಳ್ಯ: ಒಳಚರಂಡಿ ಮಂಡಳಿ ಅಧಿಕಾರಿಗಳ ಗೈರು ಹಾಜರಿಯಿಂದ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆ ಯಾವುದೇ ನಿರ್ಣಯಕೈಗೊಳ್ಳದೆ ಮುಕ್ತಾಯವಾಯಿತು.ಪಟ್ಟಣದಲ್ಲಿ ಹಾದು ಹೋಗುವ ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿ ವಿಸ್ತರಣೆ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕಾಮಗಾರಿ ಪ್ರಗತಿ ಕುರಿತು ವಿಮರ್ಶಸಲು ಪ್ರತಿ 15 ದಿನಗಳಿಗೊಮ್ಮೆ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಿದಂತೆ ಗುರುವಾರ ಸಭೆಯನ್ನು ಕರೆಯಲಾಗಿತ್ತು. ಪುತ್ತೂರು ಸಹಾಯಕ ಆಯುಕ್ತ ಡಾ.ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಮಗಾರಿ ನಡೆಯದಿದ್ದರೂ ಕಚೇರಿ ಕಡತಗಳ ಮಟ್ಟದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಒಳಚರಂಡಿ ಕಾಮಗಾರಿ ಪೂರ್ತಿಗೊಳಿಸಲು ಇನ್ನೂ 39 ಲಕ್ಷ ರೂಪಾಯಿ ಮಂಜೂರಾಗಿದೆ ಎಂದವರು ಹೇಳಿದರು.

ಸೋಮವಾರದಿಂದ ಕೆಲಸ ಆರಂಭಿಸಲಾಗುವುದೆಂದು ಒಳಚರಂಡಿ ಮಂಡಳಿ ಅಧಿಕಾರಿಗಲು ತಿಳಿಸಿದ್ದಾಗಿ ಪ.ಪಂ. ಎಂಜಿನಿಯರ್ ಅರುಣ್‌ಕುಮಾರ್ ಹೇಳಿದರು. ಪ್ರತಿ 15 ಮೀಟರ್‌ಗೆ ಒಂದರಂತೆ ಮುಖ್ಯ ರಸ್ತೆಯಲ್ಲಿ 52 ಮ್ಯಾನ್‌ಹೋಲ್‌ಗಳಿದ್ದು, ಅವುಗಳನ್ನು ಪುನಃ ನಿರ್ಮಿಸಬೇಕಾಗಿದೆ. ಅವುಗಳಿಗೆ ರಸ್ತೆಯ ಎರಡೂ ಬದಿಗೆ ಸಂಪರ್ಕ ಕಲ್ಪಿಸಬೇಕಾಗಿದೆ. ಆ ಬಳಿಕವೇ ತಾವು ಕಾಮಗಾರಿ ಆರಭಿಸುವುದೆಂದು ಕೆಆರ್‌ಡಿಸಿಎಲ್ ಅಧಿಕಾರಿ ಮಂಜುನಾಥ್ ತಿಳಿಸಿದರು. ಏ.7ರ ಮುನ್ನ ಮ್ಯಾನ್‌ಹೋಲ್ ಕೆಲಸ ಆರಂಭಿಸಿದರೆ ಮೇ. 15ರ ವೇಳೆಗೆ ರಸ್ತೆ ಕಾಮಗಾರಿಯನ್ನು ಮುಗಿಸುತ್ತೇವೆ ಎಂದವರು ತಿಳಿಸಿದರು.

ಕುಂಟು ನೆಪ ಬೇಡ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏ.15ರ ಮುನ್ನ 2 ಕಿ.ಮೀ.ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ ಅಧಿಕಾರಿಗಳು ಈಗ ಕುಂಟು ನೆಪ ಹೇಳುತ್ತಿದ್ದಾರೆ. ಮ್ಯಾನ್‌ಹೊಲ್‌ಗಳನ್ನು ಮುಟ್ಟಿ ಹೋದ ಅಧಿಕಾರಿಗಳ ಪತ್ತೆಯೇ ಇಲ್ಲ ಎಂದ ಪ.ಪಂ. ವಿರೋಧ ಪಕ್ಷದ ನಾಯಕ ಎಂ. ವೆಂಕಪ್ಪಗೌಡ, ಈಗ ಟೆಂಡರ್ ಪ್ರಕ್ರಿಯೆ ಇದೆ ಎನ್ನುತ್ತಾರೆ, ಆಗ ಗೊತ್ತಿರಲಿಲ್ಲವೆ ಎಂದು ಪ್ರಶ್ನಿಸಿದರು. ಸಂಸದರು ಬಂದು ಬೈದಾಗ ಕಾಮಗಾರಿ ಮುಗಿಸುವ ಮಾತನಾಡುವ ಅಧಿಕಾರಿಗಳು ಸಭೆಯಲ್ಲಿ ಕುಂಟು ನೆಪ ಒಡ್ಡುತ್ತಿದ್ದಾರೆ. ಮತ್ತೆ ಸಂಸದರನ್ನೇ ಕರೆಯಿರಿ ಕಾಂಗ್ರೆಸ್‌ನವರೂ ಅವರ ಜತೆಗೆ ಬರುತ್ತೇವೆ. ಅವರಿಗೆ ಬಿಸಿ ಮುಟ್ಟಿಸಬೇಕು ಎಂದವರು ಹೇಳಿದರು.  

ಶೀಘ್ರ ಕಾಮಗಾರಿ ಮುಗಿಸಬೇಕು ಎಂದು ಡಿ.25ಕ್ಕೆ ಜಮೀನು ಬಿಟ್ಟುಕೊಟ್ಟ ನಾಗರಿಕ ಮಾತಿಗೆ ಪ್ರತಿ ಮಾತನಾಡುವುದು ಸಾಧುವಲ್ಲ, 6 ವರ್ಷಗಳ ಕಾಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಪಾರಾದ ಒಳಚರಂಡಿ ಮಂಡಳಿಯವರು ಇನ್ನು 6 ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುವುದನ್ನು ನಂಬುವುದು ಕಷ್ಟ. ಏನಿದ್ದರೂ ಅವರು ಸಭೆಗೆ ಗೈರು ಹಾಜರಾಗಿ ಮತ್ತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಡಾ.ಹರೀಶ್ ಕುಮಾರ್ ಅಸಮಧಾನ ವ್ಯಕ್ತಪಡಿಸಿದರು.

ಬಳಿಕ ಪಪಂ ಅಧ್ಯಕ್ಷೆ ಸುಮತಿ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು. ಯಾವುದೇ ನಿರ್ಣಯ ಕೈಗೊಳ್ಳದೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಪ.ಪಂ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ, ಸದಸ್ಯರು, ಉದ್ಯಮಿ ವಿಶ್ವನಾಥ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.