ADVERTISEMENT

ಅಯ್ಯಪ್ಪ ವ್ರತಧಾರಿಗಳ ಬಂಧನ, ಬಿಡುಗಡೆ-ವಿವಾದಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:06 IST
Last Updated 19 ಡಿಸೆಂಬರ್ 2012, 11:06 IST

ಮಂಗಳೂರು: ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಅಯ್ಯಪ್ಪ ವ್ರತಧಾರಿಗಳ ವಸ್ತ್ರಸಂಹಿತೆಗೆ ಪ್ರಾಚಾರ್ಯರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಸತತ ಎರಡನೇ ದಿನವಾದ ಮಂಗಳವಾರ ಕೂಡ ಕಾಲೇಜಿನ ಹೊರಗಡೆ ಪ್ರತಿಭಟನೆಯಲ್ಲಿ ತೊಡಗಿದ 30ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಶಬರಿಮಲೆ ಯಾತ್ರೆ ಮುಗಿಸಿ ಬರುವವರೆಗೆ ವಿದ್ಯಾರ್ಥಿ ರಕ್ಷಿತ್ ಕುಮಾರ್ ರಾವ್ ಕಾಲೇಜಿಗೆ ಬರದೆ ಇರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ವಿವಾದ ಕೊನೆಗೊಂಡಿದೆ. ಕಾಲೇಜಿನಲ್ಲಿ ಹಲವು ವ್ರತಧಾರಿಗಳಿದ್ದರೂ, ಅವರೆಲ್ಲರೂ ಕಾಲೇಜಿನ ನಿಯಮಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ.

`ಇದೊಂದು ತೀರಾ ಸರಳ ಸಂಗತಿಯಾಗಿತ್ತು. ಅಂಗಿಯ ಒಳಗಡೆ ಶಾಲು ಹೊದ್ದುಕೊಂಡು ಕಾಲೇಜಿಗೆ ಬಂದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಕೆಲವೊಂದು ವಿದ್ಯಾರ್ಥಿಗಳಿಗೆ  ಶ್ರೀರಾಮ ಸೇನೆಯ ಕಾರ್ಯಕರ್ತರು ಈ ವಿಚಾರದಲ್ಲಿ ಕುಮ್ಮಕ್ಕು ನೀಡಿದ್ದೇ ಸಮಸ್ಯೆಯ ಮೂಲವಾಗಿತ್ತು' ಎಂದು ಕಾಲೇಜಿನ ಪ್ರಾಚಾರ್ಯೆ ಹುಂಡಿ ಪ್ರಭಾ ಕಾಮತ್ ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.

`ವಿದ್ಯಾರ್ಥಿ ಮನೆಯಲ್ಲೇ ಇದ್ದು ವ್ರತ ಕೊನೆಗೊಳಿಸುವುದಾಗಿ ಹೇಳಿದ್ದಾನೆ. ಆತನಿಗೆ ಕಡಿಮೆ ಬೀಳುವ ಹಾಜರಾತಿಯನ್ನು ಬಳಿಕ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ. ಆದರೆ ಆತನಿಗೆ ಹಾಜರಾತಿ ಕೊರತೆ ಎದುರಾದರೆ ಕಾಲೇಜು ಆಡಳಿತ ಹೊಣೆ ಅಲ್ಲ. ಕಾಲೇಜು ಸಮವಸ್ತ್ರ ನೀತಿಯಲ್ಲೂ ಯಾವುದೇ ಬದಲಾವಣೆ ಮಾಡುವುದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.