ADVERTISEMENT

ಅಸ್ಪೃಶ್ಯತೆ ಇನ್ನೂ ಜೀವಂತ: ವಿಷಾದ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:35 IST
Last Updated 20 ಅಕ್ಟೋಬರ್ 2012, 4:35 IST

ಮುಡಿಪು: ಭಾರತದ ಸುಮಾರು 50 ಗ್ರಾಮಗಳಲ್ಲಿ ದಲಿತ ವರ್ಗದ ಜನರು ಬಹಳಷ್ಟು ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಇಂದಿಗೂ ಅಸಮಾನತೆ, ಅಸ್ಪ್ರಶ್ಯತೆಗಳು ತಾಂಡವವಾಡುತ್ತಿದ್ದು, ಅವರ ಬದುಕು ಅಸಹನೀಯವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತು 65 ವರ್ಷ ಕಳೆದರೂ ದಲಿತರ ಅಭಿವದ್ಧಿಗಾಗಿ ಕೈಗೊಂಡ ಕಾನೂನುಗಳಲ್ಲಿ ಇನ್ನೂ ಬದಲಾವಣೆಯಾಗಿಲ್ಲ ಎಂದು ಸಿಎಸ್‌ಎಸ್‌ಇಐಪಿ ನಿರ್ದೇಶಕ ಪ್ರೊ. ಕಾಂಚಾ ಐಳಯ್ಯ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಸಾಮಾಜಿಕ ಬಹಿಷ್ಕಾರ ಹಾಗೂ ಅಂತರ್ಗತ ನಿಯಮ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿ.ವಿ. ಹಳೆ ಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ನಡೆದ ~ಪಕ್ಷಪಾತ ಮತ್ತು ಸಾಮಾಜಿಕ ಬಹಿಷ್ಕಾರ: ಭಾರತದಲ್ಲಿ ದಲಿತರ ಅಭಿವೃದ್ಧಿ ಅನುಭವ~ ಎಂಬ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಇಂದು ಕೂಡಾ ನಮ್ಮ ಸಮಾಜದಲ್ಲಿ ಅಸ್ಪ್ರಶ್ಯತೆ, ಮೂಢನಂಬಿಕೆಗಳು ಬಲವಾಗಿ ಬೇರೂರಿವೆ ಎಂದರೆ ದಲಿತರಿಗೆ ದೇವಸ್ಥಾನ ಒಳಗೆ ಪ್ರವೇಶಿಸಲು ಅವಕಾಶ ದೊರೆತಿದೆಯೇ ವಿನಃ ಗರ್ಭಗುಡಿಗೆ ತೆರಳಲು ಸಾಧ್ಯವಾಗಿಲ್ಲ. ಇಲ್ಲಿ ಮೇಲ್ವರ್ಗದವರ ದಬ್ಬಾಳಿಕೆ ಎದ್ದು ಕಾಣುತ್ತಿದ್ದೆ. ದೇವಸ್ಥಾನಗಳಲ್ಲಿ ಪೂಜೆ ಮಾಡುವ ಇತರ ವರ್ಗಳ ಶೇ ನೂರು ಅರ್ಚಕರಲ್ಲಿ 15ರಷ್ಟು ಮಂದಿಯನ್ನಾದರೂ ಅರ್ಚಕರನ್ನಾಗಿ ನೇಮಿಸಿ ಎಂದು ನಾನು ಒತ್ತಾಯಿಸಿದ್ದೇನೆ. ಆದರೆ ನನ್ನ ಒತ್ತಾಯ ಮೂಲೆಗುಂಪಾಗಿದೆ~ ಎಂದು ಅವರು ವಿಷಾದಿಸಿದರು.

ದಲಿತರು ಅಥವಾ ಹಿಂದುಳಿದ ವರ್ಗದ ಜನರು ಕೇವಲ ಒಂದು ವಾರದ ಮಟ್ಟಿಗೆ ಎಲ್ಲಾ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರೆ ಇಡೀ ದೇಶದಲ್ಲೇ ಜನ ಜೀವನ ಅಸ್ತವ್ಯಸ್ತಗೊಳ್ಳಬಹುದು. ಆಗ ದಲಿತರ ಪ್ರಭಾವ ಎಲ್ಲರಿಗೂ ಅರಿವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಂಸದ ಬಿ.ಕೆ.ಹರಿಪ್ರಸಾದ್, `ನಮ್ಮ ಸಮಾಜದಲ್ಲಿ ಕೇವಲ ಮೇಲ್ವರ್ಗ ಮತ್ತು ಶ್ರೀಮಂತರಿಗೆ ಮಾತ್ರ ಸ್ವಾತಂತ್ರ್ಯದ ಹಕ್ಕು ದೊರಕಿದೆ. ದಲಿತರಿಗೆ ಮತ್ತು ಹಿಂದುಳಿದವರನ್ನು ಇಂದು ಕೂಡಾ ಕೀಳು ಭಾವನೆಯಿಂದಲೇ ನೋಡಲಾಗುತ್ತಿದೆ. ದಲಿತರ ಬದುಕು ಹಸನಾಗಬೇಕಾದರೆ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ದಲಿತ ವರ್ಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು~ ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಬಹಿಷ್ಕಾರ ಹಾಗು ಅಂತರ್ಗತ ನಿಯಮ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.