ADVERTISEMENT

ಆಳ್ವಾಸ್ ವಿರಾಸತ್ ಉದ್ಘಾಟನೆಗೆ ನಾಗಾಲ್ಯಾಂಡ್‌ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 5:13 IST
Last Updated 30 ಡಿಸೆಂಬರ್ 2017, 5:13 IST

ಮೂಡುಬಿದಿರೆ: ‘ಜನವರಿ 12ರಂದು ನಡೆಯುವ ‘ಆಳ್ವಾಸ್ ವಿರಾಸತ್ 2018’ ಅನ್ನು ನಾಗಾಲ್ಯಾಂಡ್ ರಾಜ್ಯದ ರಾಜ್ಯಪಾಲ ಪಿ.ಬಿ.ಆಚಾರ್ಯ ಉದ್ಘಾಟಿಸುವರು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ತಿಳಿಸಿದ್ದಾರೆ.

ಉಡುಪಿಯವರಾದ ರಾಜ್ಯಪಾಲ ಆಚಾರ್ಯ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು, 1949ರಲ್ಲಿ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ ಪದವಿ ಪಡೆದವರು. ಕಾನೂನು ಪದವಿಯನ್ನು ಮುಂಬೈಯಲ್ಲಿ ಪೂರೈಸಿದ ಇವರು ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಹಮ್ಮಿಕೊಂಡಿದ್ದ ಈಶಾನ್ಯ ಭಾರತದ ಬುಡಕಟ್ಟು ಯುವಜನತೆಯ ವಿದ್ಯಾಭ್ಯಾಸದ ಅಭಿಯಾನ 'ಭಾರತವು ನನ್ನ ಮನೆ'ಯಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಹಲವು ಬುಡಕಟ್ಟು ವಿದ್ಯಾರ್ಥಿಗಳಿಗೆ ತನ್ನ ಮನೆಯಲ್ಲಿಯೇ ಆಶ್ರಯ ನೀಡಿ ವಿದ್ಯಾಭ್ಯಾಸ ನೀಡಿದವರು.

ADVERTISEMENT

ರಾಣಿಮಾ ಗೈಡಿನ್ಲು ಹೆಸರಿನ ರಾಷ್ಟ್ರೀಯ ಬುಡಕಟ್ಟು ಉಪಭಾಷೆಗಳ ಅಕಾಡೆಮಿಯ ಮೂಲಕ ರಾಷ್ಟ್ರೀಯ ಬುಡಕಟ್ಟು ನಾಯಕರ ಕುರಿತು ಹತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಶಾನ್ಯ ಭಾರತದ ಬುಡಕಟ್ಟು ಜನಾಂಗದ ಗಾದೆಗಳು, ಜನಪದ ಕತೆಗಳು ಹಾಗೂ ಹಾಡುಗಳನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.