ADVERTISEMENT

ಉಚ್ಚಿಲ: ಜಿಲ್ಲಾ ಮಟ್ಟದವಿಜ್ಞಾನ ಕಲರವ 15, 16ರಂದು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:49 IST
Last Updated 12 ಡಿಸೆಂಬರ್ 2012, 10:49 IST

ಪಡುಬಿದ್ರಿ: ದಕ್ಷಿಣ ಮೊಗವೀರ ಹಿತಸಾಧನಾ ವೇದಿಕೆ ಆಡಳಿತದ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಡಿಸೆಂಬರ್ 15-16ರಂದು ಅಂತರ ಜಿಲ್ಲಾ ಮಟ್ಟದ  ವಿಜ್ಞಾನ ಕಲರವ ಸ್ಪರ್ಧಾ ಕಾರ್ಯಕ್ರಮದಡಿ ಪ್ರೌಢಶಾಲಾ ಶಿಕ್ಷಕರಿಗೆ ಗಣಿತ ಮಾದರಿ ತಯಾರಿ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಆಯೋಜಿಸಲಾಗಿದೆ.

ಮಂಗಳವಾರ ಕಾಪುವಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ಶರತ್ ಗುಡ್ಡೆಕೊಪ್ಲ ಮಾಹಿತಿ ನೀಡಿ, ಸ್ಪರ್ಧೆಯಲ್ಲಿ ಅವಿಭಜಿತ ಜಿಲ್ಲೆಯ 60ಶಾಲೆಗಳ ವಿದ್ಯಾರ್ಥಿಗಳು, 20ಶಾಲೆಗಳ ಶಿಕ್ಷಕರು ಭಾಗವಹಿಸಲಿದ್ದು, ವಿಜೇತ 5 ವಿದ್ಯಾರ್ಥಿಗಳಿಗೆ ತಲಾ ರೂ. 5,000 ನಗದು ಹಾಗೂ ಸ್ಮರಣಿಕೆ, ವಿಜೇತ 3 ಶಿಕ್ಷಕರಿಗೆ ತಲಾ ರೂ. 3,000 ನಗದು ಹಾಗೂ ಸ್ಮರಣಿಕೆ ಮತ್ತು ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದರು.

ಇದೇ 14ರಂದು ಸ್ಪರ್ಧೆ ನಡೆಯಲಿದ್ದು, 15ರಂದು ಈ ವಿಜ್ಞಾನ ಸಂಬಂಧಿ ಕಾರ್ಯಕ್ರಮ ವೀಕ್ಷಿಸಲು ವಿಜ್ಞಾನಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ನಡೆಯುವ ಕಾರ್ಯಕ್ರಮದಲ್ಲಿ ರಸಾಯನ ರಹಸ್ಯ ಪ್ರಾತ್ಯಕ್ಷಿಕೆ, ವಿಜ್ಞಾನ ಕಲಿಕಾ ಮಾದರಿಗಳ ವಿವರಣಾತ್ಮಕ ಪ್ರದರ್ಶನ, ವಿಜ್ಞಾನ ಸಂಬಂಧಿ ಚಲನಚಿತ್ರಗಳ ಪ್ರದರ್ಶನ, ಪವಾಡಗಳಲ್ಲಿರುವ ರಹಸ್ಯ ತಿಳುವಳಿಕೆಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಇದೇ 14 ಶುಕ್ರವಾರ ಬೆಳಿಗ್ಗೆ 9.30ಕ್ಕೆ ಉಚ್ಚಿಲ ಮಹಾಲಕ್ಷ್ಮಿ ಶಾಲೆಯಲ್ಲಿ ಮಾಜಿ ಶಾಸಕ ಯು.ಆರ್.ಸಭಾಪತಿ ವಿಜ್ಞಾನ ಕಲರವ ಉದ್ಘಾಟಿಸಲಿರುವರು.

15 ಶನಿವಾರ ಸಂಜೆ 3.30ಕ್ಕೆ ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ವಿಜೇತರಿಗೆ ಬಹುಮಾನ ವಿತರಿಸಲಿರುವರು.

ಕಳೆದ ಆಗಸ್ಟ್ ತಿಂಗಳಲ್ಲಿ ಶಾಲಾ ಬೆಳ್ಳಿಹಬ್ಬ ಸಮಾರಂಭ ಉದ್ಘಾಟನೆಗೊಂಡು ಈಗಾಗಲೇ ಹಲವು ಕಾರ್ಯಕ್ರಮ ನಡೆಸಲಾಗಿದ್ದು, ಇದೇ 28 ಶುಕ್ರವಾರ ಶಾಲಾ ಬೆಳ್ಳಿಹಬ್ಬ ಸಮಾರೋಪ ಸಮಾರಂಭ ನಡೆಯಲಿದೆ.ಗೋಷ್ಠಿಯಲ್ಲಿ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಸರ್ವೋತ್ತಮ ಕುಂದರ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಭರತ್ ಎರ್ಮಾಳ್, ಕಾರ್ಯಕ್ರಮ ಸಂಚಾಲಕ ಡಾ. ರವೀಂದ್ರನಾಥ್ ಬೋಳಾರ್, ಶಾಲಾ ಮುಖ್ಯೋಪಾಧ್ಯಾಯ ವಿಜಯಕುಮಾರ್ ಸೋನ್ಸ್, ಶಾಲಾ ಸಮಿತಿ ಸದಸ್ಯ ದಿನೇಶ್ ಮೂಳೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.