ಉಳ್ಳಾಲ: ಒಖಿ ಚಂಡಮಾರುತದ ಪ್ರಭಾವಕ್ಕೆ ಇಲ್ಲಿನ ಸಮುದ್ರದ ಉಬ್ಬರದಿಂದ ಸೋಮೇಶ್ವರ, ಉಳ್ಳಾಲ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರ ಮುಂತಾದ ಪ್ರದೇಶಗಳಲ್ಲಿ ಶನಿವಾರ ರಾತ್ರಿ 9 ರಿಂದ ಭಾನುವಾರ ನಸುಕಿನ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಗಡಿ ಪ್ರದೇಶ ತಲಪಾಡಿಯಿಂದ ಉಳ್ಳಾಲದವರೆಗೆ ಸಮುದ್ರ ತೀರದಲ್ಲಿ ನೆಲೆಸಿದ್ದ ಸುಮಾರು 80 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
‘ಸೋಮೇಶ್ವರ ಭಾಗದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಕಡಲ್ಕೊರೆತ, ಸಮುದ್ರದ ಪ್ರಕೋಪ ಇರುತ್ತದೆ. ಕಡಲ್ಕೊರೆತ ತಡೆಯಲು ಶೀಘ್ರವೇ ಕಲ್ಲುಗಳನ್ನು ಮತ್ತೆ ಜೋಡಿಸುವ, ತಾತ್ಕಾಲಿಕ ತಡೆ ಕಾಮಗಾರಿಯನ್ನು ನಡೆಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸಮುದ್ರದ ವಿಕೋಪ ಭಾನುವಾರ ರಾತ್ರಿ 12 ರವರೆಗೆ ಇರುವುದರಿಂದ ಸಮುದ್ರ ತೀರದವರು ಸ್ಥಳಾಂತರವಾಗಬೇಕಿದೆ’ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಸಚಿವ ಖಾದರ್ ಭೇಟಿ
ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ. ಅವರು ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಹಾನಿಗೀಡಾದ ಪ್ರದೆಶಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
‘ತಮಿಳುನಾಡು, ಕೇರಳ ಸೇರಿದಂತೆ ದೇಶದ ಕರಾವಳಿ ಭಾಗದಲ್ಲಿ ಹಾನಿ ಮಾಡಿದ ಓಖಿ ಚಂಡಾಮಾರುತದ ದುಷ್ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾನಿಯಾಗಿದೆ. ದೇವರ ದಯೆಯಿಂದ ಕಡಿಮೆ ಪ್ರಮಾಣದಲ್ಲಿ ಆಗಿದೆ.
ಹವಾಮಾನ ಇಲಾಖೆಯ ವರದಿಯಂತೆ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಅನ್ನುವ ಮಾಹಿತಿ ದೊರೆತಿದೆ. ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದರು.
ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.