ADVERTISEMENT

ಕನ್ನಡದ ಕೆಲಸಕ್ಕೆ ಸರ್ಕಾರದ ಸಾಥ್‌: ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:12 IST
Last Updated 21 ಡಿಸೆಂಬರ್ 2013, 4:12 IST

ಮೂಡುಬಿದಿರೆ: ಸರ್ಕಾರದಿಂದ ಯಾವುದೇ ನೆರವು ಬಯಸದೇ ನಿರಂತರವಾಗಿ ಎರಡು ದಶಕಗಳಿಂದ ಸಾಂಸ್ಕೃತಿಕ ಕೆಲಸವನ್ನೂ ಒಂದು ದಶಕದಿಂದ ಕನ್ನಡದ ಕೆಲಸವನ್ನೂ ಮಾಡುತ್ತ ಬಂದಿರುವ ಆಳ್ವಾಸ್ ಕಾರ್ಯಕ್ರಮಗಳನ್ನು ಸರ್ಕಾರ ಖಂಡಿತ ಬೆಂಬಲಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಅವರು ಶುಕ್ರವಾರ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ -2013ರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಹಣವಿದ್ದ ಮಾತ್ರಕ್ಕೆ ಎಲ್ಲ ಕೆಲಸವನ್ನು ಸುಸೂತ್ರವಾಗಿ ಮಾಡುವುದು ಸಾಧ್ಯ­ವಾಗುವುದಿಲ್ಲ. ಕ್ರಿಯಾಶೀಲ ಮತ್ತು ಸೃಜನಶೀಲ ಮನಸ್ಸು ಬೇಕು. ಅಂತಹ ಮನಸ್ಸನ್ನು ಹೊಂದಿರುವ ಮೋಹನ ಆಳ್ವ ಅವರು ಸಾಂಸ್ಕೃತಿಕ ಪರಂಪರೆಯನ್ನು ಮುಂದು­ವರಿಸುತ್ತಿರುವುದು ಶ್ಲಾಘನೀಯ ಎಂದರು.

ಮಕ್ಕಳಿಗೆ ಸಂಸ್ಕಾರಯುತ ನಡೆಯನ್ನು ಹೇಳಿಕೊಡು­ವಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರಿಗೆ ಆಸಕ್ತಿ ಮೂಡಿ­ಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ ಅವರು, ತಮ್ಮ 35 ವರ್ಷದ ಕಲಾಬದುಕಿನಲ್ಲಿ ಕಲೆ ಮತ್ತು ಸಾಹಿತ್ಯವನ್ನು ಸಮೀಕ­ರಿಸುವಂತಹ ಇಂತಹ ಬೃಹತ್ ಕಾರ್ಯ­ಕ್ರಮವನ್ನು ನೋಡಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಛತ್ತೀಸ್‌ಗಡದ ಪ್ರಸಿದ್ಧ ಪಾಂಡ್ವಾನಿ ಕಲಾವಿದೆ ತೀಜನ್‌ಬಾಯಿ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ನೀಡಿ ಸನ್ಮಾನಿಸಲಾಯಿತು. ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ನುಡಿಸಿರಿಯ ಸರ್ವಾಧ್ಯಕ್ಷತೆ ವಹಿಸಿರುವ ಡಾ. ಬಿ. ಎ. ವಿವೇಕ ರೈ, ಅಬುದಾಬಿಯ ಸರ್ವೋತ್ತಮ ಶೆಟ್ಟಿ, ಬೆಹರಿನ್ ಕನ್ನಡ ಸಂಘದ ಅಧ್ಯಕ್ಷ ರಾಜ್‌ಕುಮಾರ್, ಜರ್ಮನಿಯ ಪೀಟರ್, ಅಮೆರಿಕದ ಎಡ್ವಿನ್, ಸಂಸದ ಜಯಪ್ರಕಾಶ್ ಹೆಗ್ಡೆ, ಸುರೇಂದ್ರ ಕುಮಾರ್ ಮತ್ತು ಹರ್ಷೇಂದ್ರ ಕುಮಾರ್ ಇದ್ದರು. ಡಾ. ಎಂ. ಮೋಹನ ಆಳ್ವ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.