ADVERTISEMENT

ಕರಾವಳಿಗೆ ಕಾಲಿಟ್ಟಿತು ಮಳೆ, ಬಿರುಗಾಳಿ ಸಂಭವ

ಬಿಸಿಲಿಗೆ ಬೆಂದು ಬಸವಳಿದಿದ್ದ ಇಳೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2015, 6:21 IST
Last Updated 5 ಜೂನ್ 2015, 6:21 IST
ಮಂಗಳೂರು ನಗರದಲ್ಲಿ ಗುರುವಾರ ಸುರಿದ ಬಿರುಸಿನ ಮಳೆಯಲ್ಲಿ ನೆನಯುತ್ತ ಸಾಗಿದ ಪ್ರಯಾಣಿಕರು
ಮಂಗಳೂರು ನಗರದಲ್ಲಿ ಗುರುವಾರ ಸುರಿದ ಬಿರುಸಿನ ಮಳೆಯಲ್ಲಿ ನೆನಯುತ್ತ ಸಾಗಿದ ಪ್ರಯಾಣಿಕರು   

ಮಂಗಳೂರು: ಉರಿ ಬಿಸಿಲು, ಬೆವರ ಸಾಲು, ಮಳೆ ಯಾಕಾದರೂ ಬಂದಿಲ್ಲ ಎಂಬ ಗೋಳು. ಮುಂಗಾರು ಇನ್ನಷ್ಟು ವಿಳಂಬ ಎಂಬ ಸುದ್ದಿ ಕಿವಿಗೆ ಬಿದ್ದಾಗ ಮತ್ತಷ್ಟು ದಿಗಿಲು... ಕರಾವಳಿಯ ಜನರ ತಲ್ಲಣಗಳಿಗೆ ಕೊನೆ ಹೇಳುವಂತೆ ಗುರು­ವಾರ ಮಧ್ಯಾಹ್ನದಿಂದ ಮಳೆ ಸುರಿಯ­ಲಾರಂಭಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಾಸರಗೋಡು, ಮಂಗಳೂರು, ಪುತ್ತೂರು, ಸುಳ್ಯ ಸಹಿತ ಬಹುತೇಕ ಕಡೆಗಳಲ್ಲಿ ಗುರುವಾರ ಮಧ್ಯಾಹ್ನದಿಂದ ಬಿರುಸಿನ ಮಳೆ ಸುರಿಯಲಾರಂಭ­ವಾಗಿದೆ.

ಇದರಿಂದ ಸಹಜವಾಗಿಯೇ ಮುಂಗಾರು ಮಳೆ ಆರಂಭವಾದ ಲಕ್ಷಣ ಕಾಣಿಸಿದೆ. ಬೆಂದ ನೆಲ ತಂಪಾಗ­ತೊಡಗಿದ್ದು, ಹೊಲ ಗದ್ದೆಗಳಲ್ಲಿ ನೀರು ಹರಿಯಲಾರಂಭಿಸಿದೆ. ಕೃಷಿ ಚಟು­ವಟಿಕೆಯೂ ಗರಿಗೆದರುವ ಸಾಧ್ಯತೆ ಕಂಡುಬಂತು.

ಮಂಗಳೂರಿನಲ್ಲಿ ವಿದ್ಯುತ್‌ ಸಮಸ್ಯೆ: ಕಾವೂರು-ಕೇಮಾರ್ ಅಧಿಕ ಒತ್ತಡ ವಿದ್ಯುತ್‌ ಲೈನ್‌ನಲ್ಲಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ವಿಪರೀತ ಗುಡುಗು ಸಿಡಿಲಿನಿಂದ ದೋಷ ಕಂಡುಬಂದಿದೆ. ಇದರಿಂದ ಮಂಗಳೂರು ನಗರಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಅದಾಗ್ಯೂ ನೆಟ್ಲಮುಡ್ನೂರು ವಿದ್ಯುತ್ ಉಪಕೇಂದ್ರದಿಂದ ಸಾಲೆತ್ತೂರು– ಕೊಣಾಜೆ ಮಾರ್ಗವಾಗಿ ಮಂಗಳೂರು ನಗರಕ್ಕೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡು ನಗರಕ್ಕೆ ವಿದ್ಯುತ್ ಸರಬ­ರಾಜು ಮಾಡಲಾಗುತ್ತಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿ, ಸಿಬ್ಬಂದಿ ಕಾವೂರು – ಕೇಮಾರು ಅಧಿಕ ಒತ್ತಡದ ಲೈನ್‌ನಲ್ಲಿ ಇರುವ ದೋಷವನ್ನು ಸರಿಪಡಿಸಲು ಕಾರ್ಯ­ಪ್ರವೃತ್ತರಾಗಿದ್ದಾರೆ ಎಂದು ತಿಳಿಸಲಾಗಿದೆ.

ಸುಳ್ಯ ತಾಲ್ಲೂಕಿನ ದುಗಲಡ್ಕ ಸರ್ಕಾರಿ ಪ್ರೌಢಶಾಲೆಗೆ ಸಿಡಿಲು ಬಡಿದ ಪರಿಣಾಮ ಹಾನಿ ಸಂಭವಿಸಿದ್ದು, ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾದರು.

ಸಂಚಾರಕ್ಕೆ ಅಡ್ಡಿ: ವಿಟ್ಲದ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಚರಂಡಿ ಕಾಮಗಾರಿ ನಡೆದರೂ ರಸ್ತೆ­ಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗುವ ಸ್ಥಿತಿ ಇನ್ನೂ ನಿವಾರಣೆಯಾಗಿಲ್ಲ. ಗುರುವಾರ ಸಂಜೆ ವಿಟ್ಲ ಪರಿಸರದಲ್ಲಿ ಗುಡುಗು, ಮಿಂಚು, ಸಹಿತ ಸುಮಾರು ಒಂದು ತಾಸು ಭಾರಿ ಮಳೆ ಸುರಿದಿತ್ತು.

ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಚರಂಡಿಯಲ್ಲಿ ಹರಿಯಬೇಕಿದ್ದ ಮಳೆ ನೀರು ಬಸ್ ನಿಲ್ದಾಣದೊಳಗೆ ನುಗ್ಗಿದ ಪರಿಣಾಮ ರಿಕ್ಷಾ ಚಾಲಕರು ಹಾಗೂ ಬಸ್ ಚಾಲಕರು ಹಾಗೂ ಸಾರ್ವಜನಿಕರು ಇದರಿಂದ ಪರದಾಡಿದರು. ಇದರಿಂದ ಕೆಲವು ಸಮಯ ವಿಟ್ಲ ಪೇಟೆ ನದಿಯಂತೆ ಕಾಣುತ್ತಿತ್ತು. ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಉಡುಪಿಯಲ್ಲಿ ತುಂತುರು ಮಳೆ
ಉಡುಪಿ: ನಗರದಲ್ಲಿ ಗುರುವಾರ ಸತತ ಮೂರು ಗಂಟೆಗಳ ಕಾಲ ತುಂತುರು ಮಳೆ ಸುರಿದ ಪರಿಣಾಮ ಇಳೆ ತಂಪಾಯಿತು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾದ ಮಳೆ ಸಂಜೆ ಐದು ಗಂಟೆಯವರೆಗೂ ನಿರಂತರವಾಗಿ ಸುರಿಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.