ಬೈಂದೂರು: ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ದೀರ್ಘಕಾಲ ಆಡಳಿತ ನಡೆಸಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ, ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಇದಕ್ಕೆ ಕಾರಣ ಕಾರ್ಯಕರ್ತರ ನಿಷ್ಠೆ. ಎಲ್ಲ ಚುನಾವಣೆಗಳಲ್ಲೂ ಅದೇ ಕಾಂಗ್ರೆಸ್ ಪಕ್ಷದ ಬಲ ಎಂದು ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು.
ಉಪ್ಪುಂದದ ಶಂಕರ ಕಲಾ ಮಂದಿರದಲ್ಲಿ ಸೋಮವಾರ ನಡೆದ ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಹಾನುಭೂತಿಯನ್ನು ಬಂಡವಾಳವಾಗಿಸಿಕೊಂಡು ಐದು ವರ್ಷಗಳ ಹಿಂದೆ ರಾಜ್ಯದ ಅಧಿಕಾರಕ್ಕೇರಿದ ಬಿಜೆಪಿ ಮತದಾರರನ್ನು ಕಡೆಗಣಿಸಿದೆ. ಅದು ಅವರ ಯಾವ ಸಮಸ್ಯೆಗೂ ಸ್ಪಂದಿಸಿಲ್ಲ. ಆದರೆ ಕಾಂಗ್ರೆಸ್ ಸೋತಾಗಲೂ ಜನರಿಂದ ದೂರಾಗಲಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಮೂಲಕ ರಾಜ್ಯದಲ್ಲಿ ಶಾಂತಿ, ಸೌಹಾರ್ದ ಮರುಸ್ಥಾಪನೆಯಾಗುವಂತೆ ಮಾಡಬೇಕು. ಹಳಿತಪ್ಪಿದ ಅಭಿವೃದ್ಧಿಯ ಬಂಡಿಯನ್ನು ಹಳಿಗೆ ತಂದು ಅದಕ್ಕೆ ವೇಗ ನೀಡಬೇಕು ಎಂದು ಅವರು ಹೇಳಿದರು.
ಹಿರಿಯ ಕಾಯಕರ್ತರಾದ ಶ್ರೀಧರ ಪ್ರಭು, ಮಂಜು ದೇವಾಡಿಗ, ಕೃಷ್ಣ ಪೂಜಾರಿ, ಚೆಂದು ಗಾಣಿಗ, ಲಕ್ಷ್ಮೀ ಉದ್ಘಾಟಿಸಿದರು. ಸತೀಶ ಶೆಟ್ಟಿ, ಎಂ.ಗೋವಿಂದ ಖಾರ್ವಿ, ಅಬ್ದುಲ್ ಸಾಹೇಬ್, ಸಾವೇರ ಫರ್ನಾಂಡಿಸ್ ಕಾರ್ಯಕರ್ತರಿಗೆ ಪಕ್ಷ ನಿಷ್ಠೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಸಮಿತಿ ಸದಸ್ಯ ಎಸ್. ಮದನ್ಕುಮಾರ್ ಪ್ರಸ್ತಾವನೆ ಮಾಡಿದರು. ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ಗಿರೀಶ ಬೈಂದೂರು ಮಾತನಾಡಿದರು. ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಬ್ಲಾಕ್ ಸಮಿತಿ ಅಧ್ಯಕ್ಷ ಕೆ. ರಮೇಶ ಗಾಣಿಗ ಇತರರು ಇದ್ದರು. ಗ್ರಾಮೀಣ ಸಮಿತಿ ಅಧ್ಯಕ್ಷ ಪಿ. ನಾರಾಯಣ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟರಮಣ ಖಾರ್ವಿ ವಂದಿಸಿದರು. ನಾಗರಾಜ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.