ADVERTISEMENT

ಕಿನ್ನಿಗೋಳಿ ಗ್ರಾಮೀಣ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 8:50 IST
Last Updated 10 ಮಾರ್ಚ್ 2011, 8:50 IST

ಕಿನ್ನಿಗೋಳಿ(ಮೂಲ್ಕಿ): ಇಲ್ಲಿನ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು, ಕೊಲ್ಲೂರು ಪದವು, ಗೋಳಿಜೋರ, ಶಿಮಂತೂರು ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನ ಸಂಚರಿಸಲು ಅಸಾಧ್ಯವಾಗಿದ್ದು ದುರಸ್ತಿ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘ- ಸಂಸ್ಥೆ ಮತ್ತು ರಿಕ್ಷಾ ಚಾಲಕರು ಬುಧವಾರ ಪ್ರತಿಭಟನೆ ನಡೆಸಿ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ರಸ್ತೆಯಲ್ಲಿ ನಿತ್ಯ ಸಂಚರಿಸುವ ಬಾಡಿಗೆ ರಿಕ್ಷಾ, ಕಾರು ಮಾಲಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ರಸ್ತೆಯ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಇತರ ಜನಪ್ರತಿನಿಧಿಗಳು ತೀರಾ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಆರೋಪಿಸಿದರು.

ಕಿನ್ನಿಗೋಳಿಯ ರಿಕ್ಷಾ ಚಾಲಕರ -ಮಾಲಿಕರ ಸಂಘ, ಗುತ್ತಕಾಡಿನ ಶಾಂತಿನಗರದ ಖಿಲ್‌ರಿಯಾ ಜುಮ್ಮಾ ಮಸೀದಿ ಸಮಿತಿ, ರೋಡರಿ ಸಮುದಾಯ ದಳ, ಗ್ರೀನ್ ಸ್ಟಾರ್ ಕ್ರಿಕೇಟರ್ಸ್‌, ತಾಳಿಪಾಡಿ ಫ್ರೆಂಡ್ಸ್, ಪದ್ಮಶಾಲಿ ಸಮಾಜ ಸೇವಾ ಸಂಘ, ವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಮಂಡಲ, ಶ್ರೀರಾಮ ಯುವಕ ವೃಂದ, ಹರಿಹರ ಭಜನಾ ಮಂದಿರ ಗೋಳಿಜೋರ, ಕಿನ್ನಿಗೋಳಿ ಕಾರು ಚಾಲಕ- ಮಾಲಿಕರ ಸಂಘ, ನೂರುಲ್ ಹುದಾ ಅಸೋಸಿಯೆಶನ್, ಎಳತ್ತೂರು ಫ್ರೆಂಡ್ಸ್ ಕ್ಲಬ್, ಮಹಾಲಿಂಗೇಶ್ವರ ಯುವಕ ಮಂಡಲದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಿನ್ನಿಗೋಳಿಯ ಬಸ್ ನಿಲ್ದಾಣದಿಂದ ಗ್ರಾಮ ಪಂಚಾಯಿತಿ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ ಪುನರೂರು ಮನವಿ ಸ್ವೀಕರಿಸಿ ಸ್ಪಂದಿಸುವ ಭರವಸೆ ನೀಡಿದರು.

ಜಿ.ಪಂ.ನ ಮಾಜಿ ಸದಸ್ಯ ಪ್ರಮೋದ್‌ಕುಮಾರ್, ಪ್ರಕಾಶ್ ಹೆಗ್ಡೆ, ಟಿ.ಕೆ.ಅಬ್ದುಲ್ ಖಾದರ್, ಹಸನಬ್ಬ, ಉಮೇಶ್, ಟಿ.ಎ.ನಜೀರ್, ಜೇಮ್ಸ್ ಮಾರ್ಟಿಸ್, ಶಶಿಧರ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.