ADVERTISEMENT

ಕೆರೆಯಲ್ಲಿ ಮೊಸಳೆ: ಸಾರ್ವಜನಿಕರಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 9:03 IST
Last Updated 7 ಡಿಸೆಂಬರ್ 2012, 9:03 IST

ನೆಲ್ಯಾಡಿ (ಉಪ್ಪಿನಂಗಡಿ): ನೆಲ್ಯಾಡಿ ಗ್ರಾಮದ ಅತ್ರಿಜಾಲು ಗಾಣಂತಿ ಮನೆ ಅಣ್ಣು ಗೌಡ ಎಂಬವರ ತೋಟದ ಕೆರೆಯಲ್ಲಿ ಬುಧವಾರ ಮೊಸಳೆಯೊಂದು ಕಂಡು ಬಂದು ಬಳಿಕ ಅದನ್ನು ಸಾರ್ವಜನಿಕರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೆರೆಯಿಂದ ಮೇಲಕ್ಕೆ ತೆಗೆದು ನದಿಗೆ ಬಿಡಲಾಯಿತು.

ತೋಟದ ಮಧ್ಯೆ ಇದ್ದ ಕೆರೆಯಲ್ಲಿ ಮೊಸಳೆ ಬಿದ್ದಿರುವುದನ್ನು ಗಮನಿಸಿದ ಮನೆಯವರು ಸ್ಥಳೀಯರಲ್ಲಿ ವಿಚಾರ ತಿಳಿಸಿದರು. ಊರವರು ಆಗಮಿಸಿ ಕೆರೆಯ ನೀರನ್ನು ಇಂಗಿಸಿ ಜೆಸಿಬಿಯ ಮೂಲಕ ಹಗ್ಗದ ಸಹಾಯದಿಂದ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದರು.

ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಅವರು ಸ್ಥಳೀಯರ ಸಹಕಾರದೊಂದಿಗೆ ಬಲೆಯ ಮೂಲಕ ಮೊಸಳೆಯನ್ನು ಬಂಧಿಸಿದರು. ಬಳಿಕ ಅದನ್ನು ವಳಾಲು ಸಮೀಪ ನೇತ್ರಾವತಿ ನದಿಗೆ ಬಿಡಲಾಯಿತು.

ಪಂಜ ವಲಯಾರಣ್ಯಾಧಿಕಾರಿ ಮನೋಹರ ಚಿತ್ತವಾಡಗಿ, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.