ADVERTISEMENT

‘ಕೈಗೆಟುವ ದರದಲ್ಲಿ ಗುಣಮಟ್ಟದ ಔಷಧಿ ನೀಡಿ’

ಶ್ರೀನಿವಾಸ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 4:55 IST
Last Updated 7 ಡಿಸೆಂಬರ್ 2017, 4:55 IST

ಮಂಗಳೂರು: ಔಷಧ ತಂತ್ರಜ್ಞರ ಮುಖ್ಯ ಧ್ಯೇಯವೆಂದರೆ ಸಮಾಜದ ಸಮಗ್ರ ಆರೋಗ್ಯ ಸುಧಾರಣೆಗೆ ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಫಲೋತ್ಪಾದಕ ಔಷಧಿಗಳನ್ನು ಕೈಗೆಟಕುವ ದರದಲ್ಲಿ ನೀಡುವುದು ಎಂದು ಔಷಧ ನಿಯಂತ್ರಣಾಧಿಕಾರಿ ಶಂಕರ್ ನಾಯಕ್ ಹೇಳಿದರು.

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಜಿಲ್ಲಾ ಘಟಕದ ಸಹಯೋಗದೊಂದಿಗೆ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಫಾರ್ಮಸಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಪಾಂಡುರಂಗ ರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಔಷಧ ತಂತ್ರಜ್ಞರು, ಔಷಧೀಯ ವ್ಯತಿರಿಕ್ತ ಪರಿಣಾಮಗಳು ಹಾಗೂ ಅದರ ಸಂಪೂರ್ಣ ಮಾಹಿತಿಗಳನ್ನು ಸಂದರ್ಭಗಳಿಗೆ ಅನುಸಾರವಾಗಿ ರೋಗಿಗಳಿಗೆ ಮನವರಿಕೆ ಮಾಡಿಕೊಡುವುದು ಅತ್ಯವಶ್ಯಕ ಎಂದು ಹೇಳಿದರು.

ADVERTISEMENT

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಲೇಜಿನ ಪ್ರಾಂಶು ಪಾಲ ಡಾ.ಎ.ಆರ್.ಶಬರಾಯ ಮಾತನಾಡಿ, ಯಶಸ್ಸೆಂಬ ಸಾಗರ ದಾಟಿ, ಜಯಿಸುವ ದೃಢ ಛಲವನ್ನು ವಿದ್ಯಾರ್ಥಿಗಳು ಹೊಂದಬೇಕು. ಸಮಾಜದಲ್ಲಿ ದೃಢ ಆತ್ಮವಿಶ್ವಾಸದಿಂದ ಸವಾಲು ಎದುರಿಸಿ, ವಿದ್ಯಾರ್ಥಿಗಳು ಔಷಧೀಯ ತಂತ್ರಜ್ಞಾನದ ಧ್ಯೇಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಕೆ.ಎನ್. ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾದ ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಸಂದೀಪ್ ಬೇಕಲ್, ಉಪನ್ಯಾಸ ನೀಡಿದರು. ಕಾಲೇಜಿನ ತ್ರೈಮಾಸಿಕ ಸಂಪದವನ್ನು ಬಿಡುಗಡೆ ಮಾಡಲಾಯಿತು.

ಕಾಲೇಜಿನ ಪ್ರಾಧ್ಯಾಪಕ ಡಾ.ಇ.ವಿ.ಎಸ್. ಸುಬ್ರಹ್ಮಣ್ಯಂ ಸ್ವಾಗತಿಸಿದರು. ಆಗ್ನೆಸ್ ಜೈನ್ ರೋಸ್ ಮತ್ತು ಮಿನ್ನು ಸಾರ ನಿರೂಪಿಸಿದರು. ವೀರೇಶ್ ಕೆ.ಚೆಂಡೂರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.