ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.
ಪಾಲ್ಗುಣ ಮಾಸದ ಕೃಷ್ಣಪಕ್ಷದ ಮೂಲ ನಕ್ಷತ್ರದ ದಿನದಂದು ಅಲಂಕೃತಗೊಂಡ ಬ್ರಹ್ಮರಥದಲ್ಲಿ ಶ್ರೀದೇವಿಯ ಮೂರ್ತಿಯನ್ನು ಕರೆದೊಯ್ಯಲಾಯಿತು.
ರಥೋತ್ಸವದ ಪ್ರಯುಕ್ತ ದೇವಸ್ಥಾನದ ತಂತ್ರಿಗಳಾದ ಮಂಜುನಾಥ ಅಡಿಗ ನೇತೃತ್ವದಲ್ಲಿ ವಿಶೇಷ ಪೂಜೆ, ಕಲಾವೃದ್ಧಿ ಹೋಮ, ಶತರುದ್ರಾಭಿಷೇಕ, ಭೂತ ಬಲಿ, ರಥ ಬಲಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ಬಳಿಕ ದೇವರನ್ನು ಸರಸ್ವತಿ ಮಂಟಪದಲ್ಲ ಕುಳ್ಳಿರಿಸಿ ದೇವಸ್ಥಾನ ಪ್ರಮುಖ ಮೂರು ಸೀಮೆಗಳಾದ ಮೂಡನ್ನಾಡು, ಪಡವನ್ನಾಡು, ಕಬ್ಬನಾಡು ಸೀಮೆಯವರಿಂದ ಪಾರಂಪರಿಕ ರಥ ಕಾಣಿಕೆ ಸಮರ್ಪಣೆ ಹಾಗೂ ಪ್ರದೋಕ್ಷ ಪೂಜೆ ನಡೆಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್ ಮಾರುತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲ್ ಕುಮಾರ ಶೆಟ್ಟಿ, ಕಲ್ಪನಾ ಭಾಸ್ಕರ್, ಜಯಾನಂದ ಹೋಬಳಿದಾರ, ಶ್ರೀನಿವಾಸ ಕಲ್ಲೂರಾಯ, ಸವಿತಾ ದೇವಾಡಿಗ, ರಾಜೇಶ್ ತಲ್ಲೂರ್, ಅಣ್ಣಪ್ಪ ಖಾರ್ವಿ, ದೇವಸ್ಥಾನದ ಅಧೀಕ್ಷಕರುಗಳಾದ ರಾಮಕೃಷ್ಣ ಅಡಿಗ, ಕೃಷ್ಣಮೂರ್ತಿ ಮತ್ತಿತರರಿದ್ದರು.
ಪಾಲ್ಗುಣ ಮಾಸದ ಶುಕ್ಲಾ ಪಕ್ಷದ ಉತ್ತರ ನಕ್ಷತ್ರದಂದು (ಕಳೆದ ಮಂಗಳವಾರ) ಸಿಂಹ ಲಾಂಛನ ಧ್ವಜಾರೋಹಣದೊಂದಿಗೆ ಉತ್ಸವಾಚರಣೆ ಪ್ರಾರಂಭವಾಗಿತ್ತು.
ಓಕುಳಿ ಸೇವೆ: ಬುಧವಾರ ಸಂಜೆಯ ಬಳಿಕ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ಓಕುಳಿ ಸೇವೆ ಹಾಗೂ ಅವಭೃತ ಸ್ನಾನ ನಡೆಯಲಿದೆ. ರಾತ್ರಿ ಪುರ ಮೆರವಣಿಗೆ ಹಾಗೂ ಕಟ್ಟೆ ಉತ್ಸವಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.