ADVERTISEMENT

ಗುರುತು ಕಾರ್ಡ್‌ಗಳ ವಿತರಣೆಗೆ ಪ್ರಾಧಿಕಾರ ರಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 11:13 IST
Last Updated 20 ಜುಲೈ 2013, 11:13 IST

ಮಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳ ಕಾಲ ಸ್ವಯಂ ಆಡಳಿತ ನಡೆಸಿದರೂ `ಭಾರತದ ಪ್ರಜೆ' ಎಂದು ದೃಢಪಡಿಸುವ ಒಂದು ಕಾರ್ಡ್ ನೀಡುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮತದಾನಕ್ಕಾಗಿ ಗುರುತು ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮುಂತಾಗಿ ಹತ್ತಾರು ಕಾರ್ಡುಗಳನ್ನು ಮಾಡಿಸುವುದರಲ್ಲೇ ಭಾರತೀಯ ನಾಗರಿಕರು ಸಮಯ ಕಳೆಯಬೇಕಾಗಿದೆ.

ಇಷ್ಟೆಲ್ಲ ಕಾರ್ಡುಗಳನ್ನು ಮಾಡಿಸಲು ಸರ್ಕಾರ `ಏಕ ಕೇಂದ್ರ ತೆರೆಯಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಎಂ. ಜಿ. ಹೆಗಡೆ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ಬಾಡಿಗೆ ಮನೆಯನ್ನು ಬದಲಾಯಿಸುವವರು ತಮ್ಮ ವಿಳಾಸ ದೃಢೀಕರಣಕ್ಕೆ ಪರದಾಡುವಂತಾಗಿದೆ. ಅವರಿಗೆ ಗುರುತು ಪತ್ರ ಪಡೆಯಲು ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಆಧಾರ್ ಕಾರ್ಡ್ ಅಥವಾ ಯಾವುದೇ ಕಾರ್ಡುಗಳನ್ನು ಮಾಡಿಸುವಾಗ ವ್ಯಕ್ತಿಯ ವಿವರಗಳನ್ನು ಸರ್ಕಾರ ಗುಟ್ಟಾಗಿ ಇಡುವ ಬಗ್ಗೆ ಪ್ರಜೆಗಳಿಗೆ ಭರವಸೆ ಕೊಡಬೇಕು, ಕಾರ್ಡುಗಳನ್ನು ನೀಡುವ ಪ್ರಾಧಿಕಾರ ರಚನೆ, ಕಾರ್ಡುಗಳಲ್ಲಿ ಇರುವ ತೊಂದರೆ ಸರಿಪಡಿಸಲು ಸರಳ ವ್ಯವಸ್ಥೆ,  ವಿವಿಧ ಕಾರ್ಡು ನೀಡಲು ಏಕ ಗವಾಕ್ಷಿ ಯೋಜನೆ ಜಾರಿ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದು ಹೇಳಿದರು.

ಈ ಕುರಿತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲಾಗಿದ್ದು ಸರ್ಕಾರ ಕೂಡಲೇ ಕಾರ್ಡುಗಳನ್ನು ಪಡೆಯುವ ವ್ಯವಸ್ಥೆ ಸರಳಗೊಳಿಸದೇ ಇದ್ದಲ್ಲಿ ಹೋರಾಟ ನಡೆಸುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು, ಸನಾತನ ಸೇವಾ ಟ್ರಸ್ಟ್‌ನ ನಿತೀಶ್ ಸಿ.ವಿ., ಕಡಲ ಸೇವೆಯ ಅಧ್ಯಕ್ಷ ಯಶವಂತ ಮೆಂಡನ್, ಎಸ್‌ಸಿ-ಎಸ್‌ಟಿ ಸಮಿತಿಯ ಮುಖ್ಯಸ್ಥ ಪ್ರವೀಣ್ ವಾಮಂಜೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT