ಮಂಗಳೂರು: ಎಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಸಿಲುಕಿದ್ದ ಬೋಟ್ನ 10 ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ತಮಿಳುನಾಡಿನ ಈ ಮೀನುಗಾರರನ್ನು ಸುರಕ್ಷಿತವಾಗಿ ಪಣಂಬೂರಿಗೆ ಕರೆತರಲಾಗಿದೆ.
ಕೊಚ್ಚಿಯಿಂದ ಹೊರಟಿದ್ದ ತಮಿಳುನಾಡು ನೋಂದಣಿ ಹೊಂದಿದ ಮೀನುಗಾರಿಕೆ ಬೋಟ್, ಎಂಜಿನ್ ವೈಫಲ್ಯಕ್ಕೆ ಒಳಗಾಗಿತ್ತು. ಸಮುದ್ರದಲ್ಲಿ ಹವಾಮಾನ ವೈಪರೀತ್ಯವಿದ್ದು, ಭಾರಿ ಮಳೆಯ ಜತೆಗೆ 45 ನಾಟ್ಸ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಹಂತದಲ್ಲಿ ಬೋಟ್ನಲ್ಲಿದ್ದ ಮೀನುಗಾರರು ಅಪಾ ಯಕ್ಕೆ ಒಳಗಾಗಿದ್ದರು.
ಮೀನುಗಾರಿಕೆ ದೋಣಿ ಅಪಾಯದಲ್ಲಿ ಇರುವ ಕುರಿತು ಇದೇ 8 ರಂದು ಮಾಹಿತಿ ಲಭಿಸಿತ್ತು. ಅಮರ್ತ್ಯ ದೊಂದಿಗೆ ಕಾರ್ಯಾಚರಣೆ ಆರಂಭಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಕಡಲಿನ ಅಬ್ಬ ರದ ಮಧ್ಯೆಯೂ ಕೆಟ್ಟು ನಿಂತಿದ್ದ ದೋಣಿ ತಲುಪಿದರು.
ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಶನಿವಾರ ಬೆಳಿಗ್ಗೆ ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ಅಮರ್ತ್ಯದಲ್ಲಿ ಕರೆತಂದರು. ಮಧ್ಯಾಹ್ನ 1.15 ಸುಮಾರಿಗೆ ಎಲ್ಲ ಮೀನುಗಾರರು ಎನ್ಎಂಪಿಟಿಗೆ ಬಂದಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟರು.
ಪ್ರತಿಕ್ರಿಯಿಸಿರುವ ಕಮಾಂಡರ್ ಎಸ್.ಎಸ್. ದಸಿಲ್, ‘ಹವಾಮಾನ ವೈಪರೀತ್ಯ, ಕಡಲಿನ ಅಬ್ಬರದ ಮಧ್ಯೆಯೂ ನಮ್ಮ ಸಿಬ್ಬಂದಿ, ಅಮರ್ತ್ಯ ದೊಂದಿಗೆ ತೆರಳಿ, ಎಲ್ಲ ಮೀನುಗಾರರ ರಕ್ಷಣೆ ಮಾಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಪಣಂಬೂರಿಗೆ ಕರೆತರ ಲಾಗಿದೆ. ಇದೊಂದು ಮಹತ್ವದ ಕಾರ್ಯಾಚರಣೆಯಾಗಿದೆ’ ಎಂದು ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.