ADVERTISEMENT

ದಾರಿ ತಪ್ಪಿಸುತ್ತಿರುವ ಮಾಧ್ಯಮ: ಡಾ.ನಾ.ಡಿಸೋಜ ಆತಂಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:42 IST
Last Updated 21 ಡಿಸೆಂಬರ್ 2013, 4:42 IST

ಮೂಡುಬಿದಿರೆ: ‘ವಿವಿಧ ಬಗೆಯ ಮಾಧ್ಯ­ಮಗಳ ನಡುವೆ ನಾವು ಇಂದು ಸಿಲುಕಿದ್ದೇವೆ. ಇಂದಿನ ಬಹುತೇಕ ಮಾಧ್ಯ­ಮಗಳು ನಮ್ಮ ದಾರಿ ತಪ್ಪಿಸು­ತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅವರು ಬೇಸರ ವ್ಯಕ್ತಪಡಿಸಿದರು.

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಂಗವಾಗಿ ಪಂಜೆ ಮಂಗೇಶರಾಯ ವೇದಿ­ಕೆ­ಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಸಿರಿ ಕಾರ್ಯಕ್ರಮದಲ್ಲಿ ‘ಮಾಧ್ಯಮ ಎಚ್ಚರ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾ­ಡಿದರು.

‘ದೂರದರ್ಶನ ವಾಹಿನಿಗಳಲ್ಲಿ ಪ್ರಸಾ­ರ­ವಾಗುವ ಧಾರಾವಾಹಿಗಳಲ್ಲಿ ಗಂಡು- ಹೆಣ್ಣಿನ ನಡುವಿನ ಅನೈತಿಕ ಸಂಬಂಧ­ವನ್ನು ವೈಭವೀಕರಿಸ­ಲಾಗುತ್ತಿದೆ. ವೀಕ್ಷಕ­ರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂಬ ಆಸೆ ಇಲ್ಲಿಲ್ಲ. ತಮ್ಮ ಟಿಆರ್ ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹೆಚ್ಚಿಸಿಕೊಂಡು ಜಾಹೀರಾತು ಗಿಟ್ಟಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಇಂಥ ವಿಚಾ­ರ­ಗಳ ಕುರಿತು ನಾವು ಎಚ್ಚರವಹಿಸ­ಬೇಕು’ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ವಿದ್ಯಾರ್ಥಿ ಸಿ.ಎಸ್. ಶ್ರೀವತ್ಸ, ‘ಹಿಂದಿನ ತಲೆಮಾರಿನ ವಿದ್ಯಾರ್ಥಿಗಳು ಮತ್ತು ಇಂದಿನ ತಲೆಮಾರಿನ ವಿದ್ಯಾರ್ಥಿಗಳ ಧೋರಣೆ ನಡುವೆ ವ್ಯತ್ಯಾಸ ಕಂಡು­ಬರಲು ಮಾಧ್ಯಮಗಳು ಕಾರಣ. ನವ ಮಾಧ್ಯಮಗಳಿಂದ ತುಸು ಅಂತರ ಕಾಯ್ದು­ಕೊಂಡರೆ ಮಾನವ ಸಂಬಂಧ­ಗಳನ್ನು ಉಳಿಸಿಕೊಳ್ಳಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಾಧ್ಯಮಗಳೂ ಸೇರಿದಂತೆ ಯಾವುದೂ ಪರಿಪೂರ್ಣವಲ್ಲ. ಆದರೆ ಒಳಿತನ್ನು ಮಾತ್ರ ಗ್ರಹಿಸುವ ವಿವೇಕ ನಮ್ಮ ಕೈಯಲ್ಲಿದೆ’ ಎಂದು ನಿತೀಶ್ ಕುಮಾರ್ ಮಾರ್ನಾಡ್ ಹೇಳಿದರು. ‘ಕನಕದಾಸರ ಜನ್ಮದಿನದಂದು ಮಾಧ್ಯಮಗಳಲ್ಲಿ ಆರೋಗ್ಯಕರ ಚರ್ಚೆ ನಡೆಯಲಿಲ್ಲ. ಆದರೆ ಕನಕದಾಸರು ಮಾಧ್ವ ಪಂಥಕ್ಕೆ ಸೇರಿದವರೋ, ಶೈವ ಪಂಥಕ್ಕೆ ಸೇರಿದವರೋ ಎಂಬ ಅರ್ಥವಿಲ್ಲದ ಚರ್ಚೆಗಳು ನಡೆದವು’ ಎಂದು ಕೆ.ಸಿ. ವಿಜಯ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.