ಮಂಗಳೂರು: ರಾಜ್ಯ ಮಟ್ಟದಲ್ಲಿ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವಂತೆ ಭಾರತ ಕ್ರೀಡಾ ಮತ್ತು ದೈಹಿಕ ಕ್ಷಮತೆ ತರಬೇತುದಾರರ ಫೆಡರೇಷನ್ (ಎಸ್ಎಫ್ಟಿಎಫ್ಐ) ಅಧ್ಯಕ್ಷ ಮತ್ತು ಸದಸ್ಯರು ಶನಿವಾರ ನಗರಕ್ಕೆ ಆಗಮಿಸಿದ್ದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಫಿಸಿಯೊಥೆರಪಿ ಕೋರ್ಸ್ಗಳನ್ನು ಏಕರೂಪಕ್ಕೆ ತರಲು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ ಸ್ಥಾಪಿಸುವ ಅಗತ್ಯವಿದೆ ಎಂದು ಸದಸ್ಯರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮತ್ತು ಆರೋಗ್ಯ ಸಚಿವಾಲಯದ ಜತೆ ಚರ್ಚಿಸಿ ಮುಂಬರುವ ಅಧಿವೇಶನದಲ್ಲಿ ಕೌನ್ಸಿಲ್ ರಚನೆಗೆ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದರು.
ದೇಶದ ಹಲವು ರಾಜ್ಯಗಳು ಪ್ರತ್ಯೇಕ ಫಿಸಿಯೊಥೆರಪಿ ಕೌನ್ಸಿಲ್ಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೂ ಇದರ ಅಗತ್ಯವಿದೆ. ಇದರಿಂದ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಉದ್ಯೋಗಾವಕಾಶವೂ ದೊರೆಯುತ್ತದೆ ಎಂದು ಹೇಳಿದರು.
ಫೆಡರೇಷನ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ರಾಜ್ಯ ಸಂಚಾಲಕ ಎ.ಸುರೇಶಬಾಬು ರೆಡ್ಡಿ, ಖೇತನ್ ಭಾತಿಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನವಿತಾ ಪೆರೀರ, ಮುಹಮದ್ ಸುಹೇಲ್, ವೈಶಾಲಿ ಶ್ರೀಜಿತ್, ಮೆರಿಲ್ ಜೆ.ಕೊಲಾಕೊ ಇದ್ದರು.
ಸುಷ್ಮಾ, ಮೊಯಿಲಿ ಜತೆ ಭೇಟಿ: ಎಸ್ಎಫ್ಟಿಎಫ್ಐ ಸದಸ್ಯರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.