ADVERTISEMENT

ಪ್ರಧಾನಿ ವಾಸ್ತವ್ಯಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:31 IST
Last Updated 18 ಡಿಸೆಂಬರ್ 2017, 4:31 IST
ಸರ್ಕೀಟ್‌ ಹೌಸ್‌ ಎದುರು ಭಾನುವಾರ ಕರ್ತವ್ಯಕ್ಕೆ ಸಜ್ಜಾಗಿದ್ದ ಪೊಲೀಸ್ ಸಿಬ್ಬಂದಿ.
ಸರ್ಕೀಟ್‌ ಹೌಸ್‌ ಎದುರು ಭಾನುವಾರ ಕರ್ತವ್ಯಕ್ಕೆ ಸಜ್ಜಾಗಿದ್ದ ಪೊಲೀಸ್ ಸಿಬ್ಬಂದಿ.   

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವಾಸ್ತವ್ಯಕ್ಕಾಗಿ ನಗರದ ಸರ್ಕೀಟ್‌ ಹೌಸ್‌ನಲ್ಲಿ ಭರದ ಸಿದ್ಧತೆ ನಡೆದಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯವರೆಗಿನ ಅವಧಿಯಲ್ಲಿನ ತುರ್ತು ಬಳಕೆಗಾಗಿ ಪ್ರಧಾನಿಯವರ ತಾತ್ಕಾಲಿಕ ಕಚೇರಿ ತೆರೆಯಲಾಗುತ್ತಿದೆ.

ಸಂಪೂರ್ಣ ಅತಿಥಿಗೃಹ ವಿಶೇಷ ಭದ್ರತಾ ದಳದ (ಎಸ್‌ಪಿಜಿ) ವಶದಲ್ಲಿದೆ. ನಗರದ ಪೊಲೀಸರೂ ಭದ್ರತೆ ಒದಗಿಸುತ್ತಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳ ತಂಡ, ಪೊಲೀಸರು ಮತ್ತು ಪ್ರಧಾನಿಯವರ ಸಚಿವಾಲಯದ ಹೊರತಾಗಿ ಅತಿಥಿಗೃಹಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಸರ್ಕೀಟ್‌  ಹೌಸ್‌ ಆವರಣ ಮತ್ತು ಹೊರ ಭಾಗದಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ.

ಒಖಿ ಚಂಡಮಾರುತದಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಮಂಗಳವಾರ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ, ಸೋಮವಾರ ರಾತ್ರಿಯೇ ಮಂಗಳೂರು ತಲುಪುವರು. ರಾತ್ರಿ ಸರ್ಕೀಟ್‌ ಹೌಸ್‌ನಲ್ಲಿ ತಂಗಲಿದ್ದು, ಮಂಗಳವಾರ ಬೆಳಿಗ್ಗೆಯೇ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಲಕ್ಷದ್ವೀಪಕ್ಕೆ ತೆರಳುವರು.

ADVERTISEMENT

‘ಸೋಮವಾರ ರಾತ್ರಿಯ ಅವಧಿಯಲ್ಲಿ ತುರ್ತು ಬಳಕೆಗಾಗಿ ಸರ್ಕೀಟ್‌ ಹೌಸ್‌ನಲ್ಲಿ ಪ್ರಧಾನಿ ಸಚಿವಾಲಯದ ತಾತ್ಕಾಲಿಕ ಕಚೇರಿಯನ್ನು ತೆರೆಯಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಧಾನಿ, ಅವರ ಭದ್ರತಾ ತಂಡದ ಹಿರಿಯ ಅಧಿಕಾರಿಗಳು ಸರ್ಕೀಟ್‌ ಹೌಸ್‌ನಲ್ಲಿ ತಂಗುವರು. ಮಲ್ಲಿಕಟ್ಟೆಯಲ್ಲಿರುವ ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ ಎಸ್‌ಪಿಜಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.