ಬದಿಯಡ್ಕ: ಕೇರಳ ರಾಜ್ಯ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಯೋಜನೆಯಂತೆ ಮುಗು ಕ್ಲಸ್ಟರ್ ರಿಸೋರ್ಸ್ ಸೆಂಟರ್ನ ಆಶ್ರಯದಲ್ಲಿರುವ ಶೇಣಿ, ಮುಂಡಿತ್ತಡ್ಕ, ಕುಂಟಿಕಾನ, ಬಣ್ಪುತ್ತಡ್ಕ, ಏಳ್ಕಾನ, ಮಗು ಪ್ರದೇಶದ ಶಾಲೆಗಳ ಆಯ್ದ ಶಿಕ್ಷಕರು ಹಾಗೂ ಶಾಲಾ ಮಕ್ಕಳ ಪೋಷಕರಿಗೆ ಎರಡು ದಿನಗಳ ಶಿಕ್ಷಣ ಮಾಹಿತಿ ಶಿಬಿರವು ಇತ್ತೀಚೆಗೆ ಮುಂಡಿತ್ತಡ್ಕ ಮಂಜಯ್ಯ ಸ್ಮಾರಕ ಎಯುಪಿ ಶಾಲೆಯಲ್ಲಿ ನಡೆಯಿತು.
ಗುಣಮಟ್ಟದ ಶಿಕ್ಷಣ, ಮಕ್ಕಳ ಶೈಕ್ಷಣಿಕ ಹಕ್ಕುಗಳು, ಶಾಲಾ ಆಡಳಿತ ಸಮಿತಿ ಹಾಗೂ ಸರ್ವ ಶಿಕ್ಷಣ ಅಭಿಯಾನದ ಚಟುವಟಿಕೆಯ ಕುರಿತು ಮಾಹಿತಿ ನೀಡಲಾಯಿತು. 6ರಿಂದ 14ನೇ ವಯಸ್ಸಿನ ತನಕದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಆರ್.ಟಿ.ಇ ಕಾಯ್ದೆಯನ್ನು ಈಗಾಗಲೇ ಕೇರಳ ಸರ್ಕಾರ ಜಾರಿಗೊಳಿಸಲಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡದ ಪೋಷಕರ ವಿರುದ್ಧ ಅಪರಾಧ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಬಹುದು ಎಂಬ ಅಂಶವನ್ನು ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು.
ಶಿಬಿರದ ಅಧ್ಯಕ್ಷತೆಯನ್ನು ರಾಮ್ ಕುಮಾರ್ ವಹಿಸಿದ್ದರು. ಜನಾರ್ದನ ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಿದರು. ಉದಯಬಾನು, ಸುಬ್ರಹ್ಮಣ್ಯ ನಂಬೂದಿರಿ, ರಾಧಾಕೃಷ್ಣ, ಸೋನಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಕಮಲಾಕ್ಷಿ, ಮಾತೃ ಸಂಘದ ಅಧ್ಯಕ್ಷೆ ಚಂದ್ರಿಕಾ, ವಿವಿಧ ಶಾಲಾ ಪ್ರತಿನಿಧಿಗಳಾದ ಸುಶೀಲಾ, ಮಹಾಲಿಂಗೇಶ್ವರ ಭಟ್, ಬಿ.ಪಿ.ಶೇಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.