
ಬಂಟ್ವಾಳ: ತಾಲ್ಲೂಕಿನಾದ್ಯಂತ ಬಹುತೇಕ ಕಲ್ಯಾಣಮಂಟಪದಲ್ಲಿ ಗುರುವಾರ ವಿವಾಹ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಧರ್ಮಸ್ಥಳ-ಮಂಗಳೂರು ಮತ್ತಿತರ ಕಡೆಗೆ ವಧೂ-ವರರ ದಿಬ್ಬಣ ಕೊಂಡೊಯ್ಯುವ ಧಾವಂತ.
ಈ ನಡುವೆ ಇಲ್ಲಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪೂರ್ಣಗೊಂಡಿರುವ ಚತುಷ್ಪಥ ಮತ್ತು ಮೇಲ್ಸೇತುವೆ ಕಾಮಗಾರಿ ಗೊಂದಲ.
ಇದೂ ಸಾಲದು ಎಂಬಂತೆ ಗುರುವಾರ ಬೆಳಿಗ್ಗೆ ತರಾತುರಿಯಲ್ಲಿ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ಒಂದು ಮೇಲ್ಸೇತುವೆ ಬಳಿ ಕೆಟ್ಟು ನಿಂತು ದಿನವಿಡೀ ಸಂಚಾರ ಅಸ್ತವ್ಯಸ್ತಗೊಳಿಸಿತು.ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರು ಮಾತ್ರವಲ್ಲ, ಧರ್ಮಸ್ಥಳ, ಸುಬ್ರಹ್ಮಣ್ಯ, ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಉಡುಪಿ, ಕಾರ್ಕಳ, ಸಾಲೆತ್ತೂರು, ವಿಟ್ಲ, ಕೊಣಾಜೆ, ಪಣೋಲಿಬೈಲು ಮತ್ತಿತರ ಕಡೆ ಸಂಚರಿಸುವ ಎಲ್ಲಾ ವಾಹನ ಮತ್ತು ಪ್ರಯಾಣಿಕರು ಬಿ.ಸಿ.ರೋಡ್ ಮೂಲಕವೇ ಹಾದು ಹೋಗಬೇಕು.
ಆಮೆಗತಿಯಲ್ಲಿ ಇಲ್ಲಿ ಸಾಗುತ್ತಿರುವ ಚತುಷ್ಪಥ ಮತ್ತು ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸುವುದು ಸೇರಿದಂತೆ ದುಃಸ್ಥಿತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಸರಿಪಡಿಸುವಂತೆ ನಾಗರಿಕರಿಂದ ಒತ್ತಾಯ ಕೇಳಿಬಂದಿದೆ. . ಈಗಾಗಲೇ ಸಾಕಷ್ಟು ಬಾರಿ ಮಾಧ್ಯಮಗಳು ಇಲ್ಲಿನ ಸಮಸ್ಯೆಯ ವರದಿ ಪ್ರಕಟಿಸಿವೆ. ಆದರೂ ಪ್ರಯೋಜನವಾಗಿಲ್ಲ.
ಒಟ್ಟಿನಲ್ಲಿ ಇಲ್ಲಿನ ನಗರ ಪೊಲೀಸರಿಗೆ ಕಳ್ಳತನ, ಹಲ್ಲೆ, ಜಮೀನು ನ್ಯಾಯ, ಹೊಡೆದಾಟ, ಅಪಘಾತ ಮತ್ತಿತರ ಪ್ರಕರಣಗಳ ನಡುವೆ ರಸ್ತೆ ಕಾಯುವುದು ಹಾಗೂ ಸಂಚಾರ ಸುಗಮಗೊಳಿಸುವ ಹೆಚ್ಚುವರಿ ಜವಾವ್ದಾರಿ ಹೊರೆಯಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.