ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳಲ್ಲಿ ನೆರೆಯ ತಮಿಳುನಾಡು ಮೀನುಗಾರರು ಅಕ್ರಮವಾಗಿ ಬೊಂಡಾಸ್ ಮೀನುಗಾರಿಕೆ ಮಾಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ವಾಸುದೇವ ಬೋಳೂರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಂತೆ ಕರ್ನಾಟಕವೂ ಸಹ ಅಕ್ರಮ ಮೀನುಗಾರಿಕೆ ನಿಷೇಧಿಸಿದೆ. ಆದರೆ ನಿಷೇಧದ ಅವಧಿಯಲ್ಲಿ ತಮಿಳುನಾಡು ಮೀನುಗಾರರು ಕಪ್ಪೆ ಬೊಂಡಾಸ್ ಮೀನುಗಳನ್ನು ರಾಜಾರೋಷವಾಗಿ ಹಿಡಿಯುವಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ನಿಂದ ಫೆಬ್ರುವರಿವರೆಗೆ ಬೊಂಡಾಸ್ ಮೀನುಗಳು ಮೊಟ್ಟೆ ಇಡುತ್ತಿದ್ದು, ಈ ಸಮಯದಲ್ಲೇ ಮೀನುಗಾರಿಕೆ ಮಾಡುವುದರಿಂದ ಅವುಗಳ ಸಂತತಿ ನಶಿಸಿ ಮೀನಿನ ಕ್ಷಾಮಕ್ಕೆ ಕಾರಣವಾಗುತ್ತದೆ. ಮೀನುಗಾರರೊಳಗಿನ ಸೌಹಾರ್ದ ಕಾಪಾಡಲು ಹೊರ ರಾಜ್ಯದವರು ಕರ್ನಾಟಕದ ನಿರ್ಣಯವನ್ನು ಗೌರವಿಸಬೇಕು.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ 3 ಜಿಲ್ಲೆಗಳ 61 ಮೀನುಗಾರರ ಸಂಘಟನೆಯಾಗಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.