ಹೆಬ್ರಿ: ಮಲೆನಾಡ ಮಡಿಲ ಸುಂದರ ಭವ್ಯ ಪುಣ್ಯ ಕ್ಷೇತ್ರ ಪುರಾತನ ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ಸಂಪೂರ್ಣ ನವೀಕರಣ ಕಾರ್ಯ ಭರದಿಂದ ನಡೆಯುತ್ತಿದ್ದು, ಏಪ್ರಿಲ್ 5ರಿಂದ 20ರ ತನಕ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶಾಭಿಪೇಕ ಮತ್ತು ಕಾಲಾವಧಿ ಮಹೋತ್ಸವ ನಡೆಯಲಿದೆ.
ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನಲೆಯ ಶಿಲಾಮಯ ಗರ್ಭಗುಡಿಯನ್ನು ಹೊಂದಿರುವ ಅಜೆಕಾರು ವಿಷ್ಣುಮೂರ್ತಿ ದೇವಾಲಯದಲ್ಲಿ ಗಣಪತಿ, ದುರ್ಗಾಪರಮೇಶ್ವರಿ, ಗೋಪಾಲಕೃಷ್ಣ ಮತ್ತು ದಕ್ಷಿಣದಲ್ಲಿ ನಾಗ ಸನ್ನಿಧಿಯಿದೆ. ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿ ದೇವಳದ ಅಂದವನ್ನು ಹೆಚ್ಚಿಸಿದೆ.
ಅಷ್ಟ ಮಂಗಳ ಪ್ರಶ್ನೆಯ ಪ್ರಕಾರ ಬಹು ಪುರಾತನವಾದ ರಾಜಮನೆತನಕ್ಕೆ ಸೇರಿದ್ದ ಈ ದೇವಸ್ಥಾನದಲ್ಲಿ ವಿಶೇಷ ಶಕ್ತಿಯಿದೆ. ಈ ಹಿಂದೆ ಹಲವು ಭಾರೀ ದೇವಸ್ಥಾನದಲ್ಲಿ ವಿವಿಧ ಅಭಿವೃದ್ದಿ ನಡೆದಿದ್ದವು. 1999ರಿಂದ ಆಡಳಿತ ಮೋಕ್ತೆಸರರಾಗಿ ಹೊಣೆಹೊತ್ತ ಅಜೆಕಾರು ದೇವಸ್ಯ ಶಿವರಾಮ ಜಿ.ಶೆಟ್ಟಿ ಸೇವೆ ಸಲ್ಲಿಸುತ್ತಿದ್ದು, ಗರ್ಭಗುಡಿ ಸಹಿತ ಸಂಪೂರ್ಣ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿದೆ.
ಸುತ್ತು ಪೌಳಿ, ಗರ್ಭಗುಡಿ, ತೀರ್ಥಮಂಟಪ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗಣಪತಿ ದೇವರ ಗುಡಿ, ತೀರ್ಥ ಭಾವಿ, ತಂತ್ರಿಗಳ ಅರ್ಚಕರ ಕೊಠಡಿ, ಪಾಠ ಶಾಲೆ, ಭದ್ರತಾ ಕೊಠಡಿ, ವಸಂತ ಮಂಟಪ, ಧ್ವಜಸ್ತಂಭ, ಆಡಳಿತ ಕಛೇರಿ ಸೇರಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಾಗಾರಿಗಳು ನಡೆಯುತ್ತಿದೆ.
ದೇವಸ್ಥಾನದ ಸಂಪರ್ಕ ರಸ್ತೆಗೆ ಡಾಂಬಾರು ಹಾಕುವ ಕೆಲಸವೂ ನಡೆಯುತ್ತಿದೆ. ವೇದಮೂರ್ತಿ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ, ವಾದಿರಾಜ ತಂತ್ರಿ, ಅರ್ಚಕರಾದ ವೆಂಕಟರಮಣ ಭಟ್, ರಂಗನಾಥ ಭಟ್ ಅವರ ಮಾರ್ಗ-ದರ್ಶನದಲ್ಲಿ ಆಡಳಿತ ಮೋಕ್ತೆಸರ ದೇವಸ್ಯ ಶಿವರಾಮ ಜಿ.ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಂದರ ಎಂ.ಶೆಟ್ಟಿ, ವ್ಯವಸ್ಥಾಪನ ಸಮಿತಿ, ವಿವಿಧ ಉಪ ಸಮಿತಿಗಳು, ಮುಂಬೈ ಸಮಿತಿ, ಅಭಿವೃದ್ದಿ ಟ್ರಸ್ಟ್ ಪದಾಧಿಕಾರಿಗಳು ಅಭಿವೃದ್ದಿಯ ಮಂಗಳ ಕಾರ್ಯ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.