ADVERTISEMENT

‘ಭಜನೆಯಿಂದ ಧರ್ಮ ಜಾಗೃತಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:01 IST
Last Updated 16 ಮಾರ್ಚ್ 2018, 10:01 IST

ವಿಟ್ಲ: ಭಜನೆಯೇ ಬದುಕು ಎಂಬ ಚಿಂತನೆಯ ಮೂಲಕ ಸಂಸ್ಕೃತಿ ಸಂಸ್ಕಾರಗಳ ಆವಾಹನೆಯಾಗುತ್ತದೆ. ಭಜನೆ ಮೂಲಕ ಧರ್ಮ ಜಾಗೃತಿಯಾಗುತ್ತದೆ ಎಂದು ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಇದೇ 31ರಂದು ನಡೆಯುವ ಹನುಮೋತ್ಸವದ ಅಂಗವಾಗಿ ಬುಧವಾರ ನಡೆದ ಭಗವನ್ನಾಮ ಸಂಕೀರ್ತನಾ ಪಾದಯಾತ್ರೆ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾರೀರಿಕ ಸೌಖ್ಯ, ಮಾನಸಿಕ ನೆಮ್ಮದಿಗೆ ಮನದುಂಬಿ, ಮೈಮರೆತು ಭಜಿಸಬೇಕು. ಭಜನೆಯಿಂದ ದೋಷಗಳ ಪರಿಹಾರ ಸಾಧ್ಯ. ಸಣ್ಣದಾದರೂ ಭಗವನ್ನಾಮ ಸಂಕೀರ್ತನೆಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರನಾಗಬಹುದು. ಭಜನೆ ನೈತಿಕ ಮೌಲ್ಯ ಹೆಚ್ಚಿಸುತ್ತದೆ ಎಂದರು.

ADVERTISEMENT

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ಮಾತನಾಡಿ, ‘ಭಗವನ್ನಾಮ ಸಂಕೀರ್ತನಾ ಪಾದಯಾತ್ರೆ ಇದೇ 31ರಂದು ಬೆಳಿಗ್ಗೆ 7ಕ್ಕೆ ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಿಂದ ಹೊರಟು ಒಡಿಯೂರು ಕ್ಷೇತ್ರಕ್ಕೆ ಬರಲಿದ್ದು,  ಇದರಲ್ಲಿ ಸಂತರು, ಭಜನ ಮಂಡಳಿಯ ಸದಸ್ಯರು, ಭಕ್ತರು ಭಾಗವಹಿಸಲಿದ್ದಾರೆ. ಮಾರ್ಗದುದ್ದಕ್ಕೂ ಅನೇಕ ಭಜನ ಮಂಡಳಿಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ವಿಟ್ಲ ಭಜನ ಪರಿಷತ್ತಿನ ಅಧ್ಯಕ್ಷ ಶೀನಪ್ಪ ನಾಯ್ಕ, ದಿನೇಶ್ ಶೆಟ್ಟಿ ಪಟ್ಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ದೇವಿಪ್ರಸಾದ್ ಶೆಟ್ಟಿ, ಪುತ್ತೂರು ಜಿಲ್ಲಾ ವಿಹಿಂಪ ಉಪಾಧ್ಯಕ್ಷ ಆನಂದ ಕಲ್ಲಕಟ್ಟ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಅನಂತಾಡಿ ಮೊದಲಾದವರು ಉಪಸ್ಥಿತರಿದ್ದರು.

ಯೋಜನೆಯ ಬಂಟ್ವಾಳ ತಾಲ್ಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.