ADVERTISEMENT

`ಮಲಯಾಳ ಆದೇಶ ಹಿಂಪಡೆಯಿರಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:25 IST
Last Updated 4 ಏಪ್ರಿಲ್ 2013, 8:25 IST

ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ವಿನಾಯಿತಿ ನೀಡದೇ ಮಲಯಾಳ ಭಾಷೆಯನ್ನು ಸರ್ಕಾರಿ ಉದ್ಯೋಗಗಳಲ್ಲಿ ಕಡ್ಡಾಯಗೊಳಿಸಿದ ಆದೇಶವನ್ನು ವಾಪಸು ಪಡೆಯಬೇಕು ಎಂದು ಹಿರಿಯ ವಕೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ ಐ.ವಿ.ಭಟ್ ಆಗ್ರಹಿಸಿದರು.

ಬಿಜೆಪಿ ಕಾಸರಗೋಡು ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಡೆದ ಕನ್ನಡಿಗರ ಹಕ್ಕು ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡಿನಲ್ಲಿ ಬದುಕುವ ಕನ್ನಡ ಭಾಷಿಕರಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮತ್ತು ಔದ್ಯೋಗಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಗಮನಹರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಮಾತನಾಡಿ, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಬದುಕುವ ಸ್ವಾತಂತ್ರ್ಯವನ್ನು  ಕೇರಳ ಸರ್ಕಾರ ಕಸಿಯುತ್ತಿದೆ. ಕರ್ನಾಟಕದಲ್ಲಿ ಐದು ಅಲ್ಪಸಂಖ್ಯಾತ ಭಾಷೆಗಳಿಗೆ ಯಾವ ಮನ್ನಣೆ ನೀಡಲಾಗುತ್ತಿದೆ ಎಂಬುದನ್ನು ಕೇರಳ ಸರ್ಕಾರ ಅರಿತುಕೊಂಡು ಎಚ್ಚೆತ್ತುಕೊಳ್ಳಬೇಕು. ಓಟ್ ಬ್ಯಾಂಕ್‌ಗಾಗಿ ಮತೀಯ ಅಲ್ಪಸಂಖ್ಯಾತರಿಗೆ ಕಣ್ಣುಮುಚ್ಚಿ ಸೌಲಭ್ಯಗಳನ್ನು ನೀಡುವ ಸರ್ಕಾರ ಕನ್ನಡಿಗರಿಗೆ ವಂಚನೆ ಎಸಗುತ್ತಿದೆ  ಎಂದವರು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಕೇರಳ ತುಳು ಅಕಾಡೆಮಿ ಸದಸ್ಯ ಅಡೂರು ಉಮೇಶ್ ನಾಯಕ್, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಉಪಾಧ್ಯಕ್ಷ ಸದಾಶಿವರಾವ್, ಎನ್.ಟಿ.ಯು. ಜಿಲ್ಲಾ ಸಮಿತಿ ಸದಸ್ಯ ನರಸಿಂಹ ಮಯ್ಯ, ಶಿವರಾಮ ಕಾಸರಗೋಡು, ಉಮೇಶ್ ಸಾಲಿಯಾನ್ ಮತ್ತಿತರರು ಇದ್ದರು.ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಶ್ರೀಕಾಂತ್ ಸ್ವಾಗತಿಸಿ, ಪ್ರಮೀಳಾ ಸಿ.ನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.