ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ವತಿಯಿಂದ ಭಾನುವಾರ ಬಿಜೈಯ ಕೆಎಂಸಿ ಆಸ್ಪತ್ರೆ ಆವರಣದಿಂದ ಅಂಬೇಡ್ಕರ್ ವೃತ್ತದ ಆಸ್ಪತ್ರೆಯವರೆಗೆ ನಡೆದ `ಹೃದಯ ಓಟ~ದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಓಟಕ್ಕೆ ಫ್ಲ್ಯಾಗ್ ಆಫ್ ಮಾಡಿದರು. ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ರೀತ್ ಅಬ್ರಹಾಂ `ಓಟದ ಜ್ಯೋತಿ~ ಹಿಡಿದರು. ಭಾರತ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಜಾವಗಲ್ ಶ್ರೀನಾಥ್, ಮಾಜಿ ಅಥ್ಲೀಟ್ಗಳಾದ ವಂದನಾ ರಾವ್, ವಂದನಾ ಶಾನುಭಾಗ್, ಅರ್ಜುನ ಪ್ರಶಸ್ತಿ ಪುರಸ್ಕೃತ ಡೈವಿಂಗ್ ಪಟು ಮಂಜರಿ ಭಾರ್ಗವಿ ಮೊದಲಾದವರು ಓಟದ ಆರಂಭಕ್ಕೆ ಮೆರುಗು ನೀಡಿದರು.
ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಕಾರ್ಪೊರೇಷನ್ ಬ್ಯಾಂಕ್ ಸಿಎಂಡಿ ರಾಮನಾಥ ಪ್ರದೀಪ್, ಆಕ್ಸಿಸ್ ಬ್ಯಾಂಕ್ನ ಸದಾಶಿವ ಮಲ್ಯ, ಎಂಆರ್ಪಿಎಲ್ನ ಪಿ.ಪಿ.ಉಪಾಧ್ಯಾಯ ಮೊದಲಾದವರು ಹಾಜರಿದ್ದರು.
ಮಣಿಪಾಲ ವಿವಿ ರಿಜಿಸ್ಟ್ರಾರ್ ಜಿ.ಕೆ. ಪ್ರಭು ಉದ್ಘಾಟನಾ ಸಮಾರಂಭದಲ್ಲಿ `ಪ್ರತಿದಿನ ನಮಗಾಗಿ ಮಿಡಿಯುವ ಹೃದಯಕ್ಕಾಗಿ ಒಂದು ದಿನವಾದರೂ ನಾವು ಓಡೋಣ~ ಎಂಬ ಸಂದೇಶ ನೀಡಿದರು. ಯೋಗೀಶ್ ಭಟ್ ಮಾತನಾಡಿ, ಮಾನವೀಯತೆಯ ಪರ್ಯಾಯ ಪದ ಹೃದಯವಂತಿಕೆ. ಅದಕ್ಕಾಗಿ ಓಡೋಣ~ ಎಂದರು.
ಲಾಲ್ಭಾಗ್- ಎಂ.ಜಿ.ರಸ್ತೆ- ಪಿವಿಎಸ್ ಸರ್ಕಲ್- ಬಂಟ್ಸ್ ಹಾಸ್ಟೆಲ್ ಮೂಲಕ ಓಟ ಸಾಗಿತು. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ಸಮಾರೋಪ ನಡೆಯಿತು. ಸಹ್ಯಾದ್ರಿ ಸ್ಕೂಲ್ ಆಫ್ ನರ್ಸಿಂಗ್ `ಪಾಲ್ಗೊಂಡ ಉತ್ತಮ ಸಂಸ್ಥೆ~ ಗೌರವ ಪಡೆದರೆ, ಬಿ.ಎ.ಎಸ್.ಎಫ್. `ಪಾಲ್ಗೊಂಡ ಉತ್ತಮ ಕಾರ್ಪೊರೇಟ್ ತಂಡ~ ಗೌರವ ಪಡೆಯಿತು. ಹಿಂದೂಸ್ಥಾನ್ ಯೂನಿಲಿವರ್ಗೆ `ಉತ್ತಮ ಘೋಷಣಾಫಲಕ~ ಗೌರವ ಲಭಿಸಿದರೆ, ಕೋಸ್ಟ್ ಗಾರ್ಡ್ಗೆ `ಉತ್ತಮ ಘೋಷಣೆ~ಗಾಗಿ ಬಹುಮಾನ ನೀಡಲಾಯಿತು.
ಜಾವಗಲ್ ಶ್ರೀನಾಥ್, ರಾಮನಾಥ ಪ್ರದೀಪ್ ಮತ್ತು ಸದಾಶಿವ ಮಲ್ಯ ಬಹುಮಾನ ವಿತರಿಸಿದರು. ರೀತ್ ಅಬ್ರಹಾಂ ಹಾಗೂ ಶ್ರೀನಾಥ್ ದಂಪತಿಯನ್ನು ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.