ವಿಟ್ಲ: ವಿಟ್ಲ ಕಸಬಾ ಗ್ರಾಮದ ದೇವಸ್ಯ ಎಂಬಲ್ಲಿ ಬದನಾಜೆ ನದಿ ಕಿಂಡಿ ಅಣೆಕಟ್ಟಿನ ಕಾಲು ಸಂಕ ಮುರಿದು ಬಿದ್ದು ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಮೂರು ತಿಂಗಳು ಕಳೆದರೂ ಆ ಕಾಲುಸಂಕ ದುರಸ್ತಿಗೊಳಿಸಲು ಸಂಬಂಧಪಟ್ಟವರು ಇದೂವರೆಗೂ ಮುಂದಾಗಿಲ್ಲ. ಇದರಿಂದ ದಾರಿ ಸಮಸ್ಯೆ ಜೀವಂತವಾಗಿದೆ.
ನೆಲ್ಲಿಗುಡ್ಡೆ, ದೇವಸ್ಯ, ದಾಸರಬೆಟ್ಟು, ಪಳ್ಳೇರಿ, ಕಂಬಳಬೆಟ್ಟು ಮುಂತಾದ ಕಡೆಗಳಿಂದ ವಿಟ್ಲ ಪೇಟೆಯನ್ನು ಸಂಪರ್ಕಿಸಲು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಕಾಲು ಸಂಕ ಆಧಾರವಾಗಿತ್ತು. ಇಲ್ಲಿಂದ ಬರುವ ಗ್ರಾಮಸ್ಥರು ಈ ಕಾಲು ಸಂಕ ಮುರಿದು ಬಿದ್ದ ಮೇಲೆ ವಿಟ್ಲ ಪೇಟೆಗೆ ಹೋಗಬೇಕಾದರೆ ಪುತ್ತೂರು ರಸ್ತೆ ಕ್ರಮಿಸಿ ತೆರಳುತ್ತಿದ್ದಾರೆ.
ಇನ್ನೂ ಕೆಲವರು ಬೇರೆ ದಾರಿಯಿಲ್ಲದೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಅಧಿಕಾರಿಗಳ ಒಪ್ಪಿಗೆ ಪಡೆದು ಇಲಾಖೆಯ ಮುಖ್ಯರಸ್ತೆ ಮೂಲಕ ತೆರಳುತ್ತಿದ್ದಾರೆ. ಅಲ್ಲಿಯ ಅಧಿಕಾರಿಗಳ ಒಪ್ಪಿಗೆ ಪಡೆಯದೇ ಆ ರಸ್ತೆಯಲ್ಲಿ ಓಡಾಡುವಂತಿಲ್ಲ. ಇದರಿಂದ ರಾತ್ರಿ ಹೊತ್ತು ಹಾಗೂ ತುರ್ತು ಸಂದರ್ಭಗಳಲ್ಲಿ ಐದು ಕಿ.ಮೀ. ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.
ಸಂಕ ಮುರಿದು ಬಿದ್ದ ದಿನ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರವೇ ಇದಕ್ಕೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ನಾಲ್ಕು ತಿಂಗಳು ಕಳೆದರೂ ಇದುವರೆಗೂ ಅತ್ತಕಡೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದೀಗ ಮಳೆಗಾಲ ಹತ್ತಿರ ಬರುತ್ತಿದ್ದು, ಈ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಈ ಸಂದರ್ಭ ಈ ಕಾಲುಸಂಕದ ನದಿ ಬದಿ ನಡೆಯಲು ವಿದ್ಯಾರ್ಥಿಗಳಿಗೆ ಕಷ್ಟ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯ ರಸ್ತೆಯಲ್ಲಿ ತೆರಳಿದರೆ ಅಲ್ಲಿಯ ಮುಖ್ಯ ಗೇಟ್ಅನ್ನು ಹಾಕುವುದರಿಂದ ವಿದ್ಯಾರ್ಥಿಗಳಿಗೆ ನದಿಯ ಬದಿ ನಡೆದಾಡಬೇಕಾದ ಅನಿವಾರ್ಯತೆ ಇದೆ.
ಸಂಬಂಧಪಟ್ಟವರು ಈ ಕಾಲು ಸಂಕದ ಕಾಮಗಾರಿ ನಡೆಸಬೇಕು. ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅವರ ಮುಖ್ಯ ರಸ್ತೆ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ಅವ ಕಾಶ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.