ಮಂಗಳೂರು: ಮೂಲಗೇಣಿದಾರರಿಗೆ ಮಾಲೀಕತ್ವ ಪ್ರದಾನ ಮಾಡುವ ವಿಧೇಯಕ ರಾಜ್ಯಪಾಲರ ಬಳಿ ಇದ್ದು ಅದು ಕಾನೂನು ಆಗಿ ಜಾರಿಯಾಗಲು ಇನ್ನೂ ಕೆಲವು ಹಂತಗಳಿವೆ. ಈ ಹಿನ್ನೆಲೆಯಲ್ಲಿ ಸವಾಲುಗಳೂ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮೂಲಗೇಣಿದಾರರು ಒಗ್ಗಟ್ಟಾಗಬೇಕು’ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಕಾನೂನು ಸಲಹೆಗಾರ ಎ.ಪಿ.ಗೌರಿಶಂಕರ್ ಮನವಿ ಮಾಡಿದರು.
ಡಾನ್ಬಾಸ್ಕೊ ಸಭಾಂಗಣದಲ್ಲಿ ಭಾನುವಾರ ನಡೆದ ವೇದಿಕೆಯ ಎರಡನೇ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ವಿಧೇಯಕ ಅಂಗೀಕಾರವಾಗಿ ಕಾನೂನು ಜಾರಿಯಾಗುವವರೆಗಿನ ಹಂತದ ಪ್ರಕ್ರಿಯೆಯ ಸ್ಥೂಲ ಮಾಹಿತಿಯನ್ನು ಸಭೆಯ ಮುಂದಿಟ್ಟರು.
ಶಾಸನಸಭೆಯಲ್ಲಿ ಮಂಜೂರಾಗಿರುವ ಈ ಕಾಯಿದೆ ಈಗ ರಾಜ್ಯಪಾಲರ ಮುಂದಿದೆ. ಜಮೀನಿಗೆ ಸಂಬಂಧಿಸಿದ ವಿಷಯವಾದ್ದರಿಂದ ಈ ವಿಷಯ ಸಮವರ್ತಿ(ಕೇಂದ್ರ-ರಾಜ್ಯಗಳಿಗೆ ಸಂಬಂಧಿಸಿದ) ಪಟ್ಟಿಗೆ ಬರುತ್ತದೆ. ಹೀಗಾಗಿ ಈ ವಿಧೇಯಕ ಕಾನೂನು ಆಗಲು ರಾಷ್ಟ್ರಪತಿಗಳ ಅಂಕಿತವೂ ಬೇಕಾಗುತ್ತದೆ ಎಂದರು.
ಮೂಲಗೇಣಿದಾರರ ಸಂಖ್ಯೆ ಅಂದಾಜು 1.5 ಲಕ್ಷ. ಧಣಿಗಳ ಸಂಖ್ಯೆ ಕೇವಲ 30. ಆದರೂ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ. ಗುರಿತಲುಪುವವರೆಗೆ ಸಂಘಟಿತರಾಗಿರಬೇಕು ಎಂದು ಎಚ್ಚರಿಸಿದರು.ವೇದಿಕೆಯ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ, ವಿಶ್ವನಾಥ ಬೋಳಾರ್, ರೊನಾಲ್ಡ್ ಡಿಸಿಲ್ವ, ಜಗದೀಶ ರಾವ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.