ADVERTISEMENT

ಯುವಜನರೇ ಸ್ವಾವಲಂಬಿಗಳಾಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 6:20 IST
Last Updated 13 ಜನವರಿ 2012, 6:20 IST

ಮಂಗಳೂರು: ವಿವೇಕಾನಂದ ಅವರು ಒಬ್ಬ ಸಂತ. ರಾಷ್ಟ್ರಭಕ್ತರೂ ಆಗಿದ್ದರು. ಅವರ ಜೀವನ, ವ್ಯಕ್ತಿತ್ವ ಬಹುಮುಖಿಯಾಗಿತ್ತು ಎಂದು ಮಂಗಳೂರಿನ ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಇಲ್ಲಿ ಹೇಳಿದರು.

ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮೋತ್ಸವ ಅಂಗವಾಗಿ ನಗರದ ಮಂಗಳಾದೇವಿಯಲ್ಲಿ ಇರುವ ರಾಮಕೃಷ್ಣ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಯುವ ಸ್ಫೂರ್ತಿ~ ಕಾರ್ಯಕ್ರಮದಲ್ಲಿ ಅವರು ಯುವ ಸಂದೇಶ ನೀಡಿದರು.

ವಿವೇಕಾನಂದ ಅವರ ಜೀವನವೇ ಸ್ಫೂರ್ತಿದಾಯಕ. ಭಾರತೀಯ ಯುವಕರು ಹೇಗೆ ಬದುಕಬೇಕು ಎಂಬುದನ್ನು ವಿವೇಕಾನಂದ ಅವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಇತಿಹಾಸ ಪೂರ್ವದ ಹಾಗೂ ಆಧುನಿಕ ಚಿಂತನೆಯನ್ನು ಇಂದಿನ ಯುವಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಯುವ ಸಮೂಹ ಏಕಾಗ್ರತೆ ಮೈಗೂಡಿಸಿಕೊಂಡಿರಬೇಕು. ವಿವೇಕಾನಂದ ಅವರಿಗೆ ಬಾಲ್ಯದಲ್ಲಿಯೇ ಅದ್ಭುತ ಏಕಾಗ್ರತೆ ಶಕ್ತಿ ಇತ್ತು. ಅವರ ಸಂದೇಶಗಳನ್ನು ಪಾಲಿಸಬೇಕು. ಕೀಳರಿಮೆ ತೊಲಗಿಸಬೇಕು. ಯುವಕರು ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್, ವಿವೇಕಾನಂದ ಅವರು ಭಾರತದ ಸಂಸ್ಕೃತಿಯ ಕಂಪನ್ನು ವಿಶ್ವಕ್ಕೆ ಪಸರಿಸಿದವರು. ಜಗತ್ತಿನ ಯುವಕರಿಗೆ ಹೊಸ ಸಂದೇಶ ನೀಡಿದ್ದಾರೆ. ಇಂದಿನ ಯುವಪೀಳಿಗೆಯೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಗುರಿಸಾಧನೆ ಮುಖ್ಯ ಧ್ಯೇಯವಾಗಿಸಿಕೊಂಡು ಇತರರಿಗೆ ಮಾರ್ಗದರ್ಶಿಯಾಗಿ ಬದುಕಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಯುವಕರ ಪಾತ್ರ ಪ್ರಮುಖವಾದುದು ಎಂದರು.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಂಗಳೂರು ಪ್ರಾದೇಶಿಕ ಹಿರಿಯ ಪ್ರಬಂಧಕ ಕೆ.ಅನಿಲ್ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಹಿರಿಯರನ್ನು ಗೌರವಿಸಬೇಕು. ಅವರ ಮಾರ್ಗದರ್ಶನದಂತೆ ಸಮಾಜದಲ್ಲಿ ಮುಂದುವರಿಯಬೇಕು. ಬೆಳೆದು ಬಂದ ದಾರಿಯನ್ನೂ ಕಡೆಗಣಿಸದೆ, ಸಮಸ್ಯೆಗಳನ್ನು ನಿವಾರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.