ಮೂಡುಬಿದಿರೆ: ವಿರಾಟ್ ವೇದಿಕೆಗೆ ತಕ್ಕಂತೆ ಸಾಲು ಸಾಲು ಖ್ಯಾತ ಹಿನ್ನೆಲೆ ಗಾಯಕರು... ಅವರ ಹಿಂದೆ ಹಿನ್ನೆಲೆ ಸಂಗೀತಕ್ಕೆ ಕುಳಿತ ಹತ್ತಾರು ಮಂದಿಯ ಸುಮಧುರ ವಾದನ... ಇವರು ಹರಿಸಿದ ಗಾಯನ ಸುಧೆಯಲ್ಲಿ ಹಿರಿಯರು, ಯುವಕರು ಎಂಬ ಭೇದವಿಲ್ಲದೆ ಮಿಂದವರು ಅನೇಕರು...
ಹೌದು. ಇಂತಹದ್ದೊಂದು ರಸಪೂರ್ಣ ಸಂಜೆಗೆ ಶುಕ್ರವಾರ ತಾಣವಾಗಿದ್ದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಅಂಗವಾಗಿ ರಚಿಸಲಾಗಿದ್ದ ರತ್ನಾಕರವರ್ಣಿ ವಿಶಾಲ ವೇದಿಕೆ.
ರಾಜೇಶ್ ಕೃಷ್ಣನ್, ಎಂ.ಡಿ. ಪಲ್ಲವಿ, ದಿವ್ಯಾ ರಾಘವನ್, ಬಿ.ಎಸ್. ಹೇಮಂತ್. ಅಜಯ್ ವಾರಿಯರ್ ಹಾಗೂ ರಾಧಾಕೃಷ್ಣ ಮೋಹನ್. ಮತ್ತೇನು ಬೇಕು ಸಭಾಂಗಣ ಕಿಕ್ಕಿರಿಯಲು.
ಮೊದಲಿಗೆ ಎಂ.ಡಿ. ಪಲ್ಲವಿ ಅವರು ಹಾಡಿದ ‘ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ ನಿರಾನಂದಮಾನಂದ ಮದ್ವೈತ ಪೂರ್ಣಂ...’ ಗಣೇಶ ಸ್ತುತಿ ಸಭೆಯ ನಾದಮಯ ಗುಂಗಿಗೆ ನಾಂದಿ ಹಾಡಿತು.
ಅವರು ಹಾಡಿದ ‘ದುನಿಯಾ’ ಚಿತ್ರ ‘ನೋಡಯ್ಯ ಕ್ವಾಟೇ ಲಿಂಗವೇ....’ ಹಾಡು ಕೇಳುಗರ ಮನಸೂರೆಗೊಂಡಿತು. ಇವೆಲ್ಲದಕ್ಕೂ ಕಳಸವಿಟ್ಟಂತೆ ಪಲ್ಲವಿ ಹಾಡಿದ ಕೆ.ಎಸ್. ನರಸಿಂಹಸ್ವಾಮಿ ರಚಿತ ‘ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು...’ ಹಾಡಂತೂ ಭೋರ್ಗರೆಯುವ ಸಂಗೀತದ ಸುಧೆಯನ್ನೇ ಹರಿಸಿತು.
ಇದಕ್ಕೆ ಹಿನ್ನೆಲೆಯಾಗಿ ಮೂಡಿ ಬಂದ ಸಂಗೀತವಂತೂ ರಸರೋಮಾಂಚನಕಾರಿಯಾಗಿ ನೋಡುಗರು ತನ್ಮಯರಾಗುವಂತೆ ಮಾಡಿತು.
ರಾಧಾಕೃಷ್ಣ ಮೋಹನ್ ಹಾಡಿದ ಕವಿರತ್ನ ಕಾಳಿದಾಸ ಚಿತ್ರದ ‘ಬೆಳ್ಳಿ ಮೂಡಿತೂ ಕೋಳಿ ಕೂಗಿತೂ’ ಹಾಡಿಗಂತೂ ಪ್ರೇಕ್ಷಕ ವೃಂದ ಹುಚ್ಚೆದ್ದು ಕುಣಿಯಿತು. ಆಕಸ್ಮಿಕ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡಂತೂ ಇಡೀ ಸಮಾರಂಭದ ತಾರಕ ಗಾಯನವಾಗಿ ಅನುರಣಿಸಿತು.
ತಡವಾಗಿ ಬಂದರೂ ರಾಜೇಶ್ ಕೃಷ್ಣನ್ ಅವರಿಗೆ ಭರಪೂರ ಕರತಾಡನ ಹಾಗು ಶಿಳ್ಳೆಗಳ ಸ್ವಾಗತ ದೊರೆಯಿತು. ಅಮೆರಿಕ ಅಮೆರಿಕ ಚಿತ್ರದ ‘ನೂರು ಜನ್ಮಕೂ ನೂರಾರು ಜನ್ಮಕೂ’ ಹಾಡಿನ ಗುಂಗಿಗೆ ಕೇಳುಗರು ತನ್ಮಯರಾಗುವಂತೆ ಮಾಡಿತು.
ಹುಚ್ಚ ಚಿತ್ರದ ‘ಉಸಿರೇ ಉಸಿರೇ ನೀ ನನ್ನ ಕೊಲ್ಲಬೇಡ’ ಹಾಡು ಕೊಂಚ ವಿಷಾದದ ಛಾಯೆಯನ್ನು ಮೂಡಿಸಿತಾದರೂ, ಮರುಗಳಿಗೆ ಅವರು ಹಾಡಿದ ನಿತ್ಯ ಹಸಿರಿನ ಗೀತೆ ‘ಸಂತೋಷಕೆ ಹಾಡು ಸಂತೋಷಕೆ....’ ಹಾಡಿಗೆ ಯುವ ಸಮೂಹ ಎದ್ದು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
ಉಳಿದಂತೆ ದಿವ್ಯಾ ರಾಘವನ್ ಹಾಗೂ ಅಜಯ್ ವಾರಿಯರ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಎರಡು ಕನಸು ಚಿತ್ರದ ‘ತಂನಂ ತಂನಂ ನನ್ನೀ ಮನಸು ಮಿಡಿಯುತ್ತಿದೆ...’ ಹಾಡಿಗೆ ಎಲ್ಲರ ಹೃದಯ ಮಿಡಿಯಿತು. ಇದನ್ನು ಅಬಾಲವೃದ್ಧರಾಗಿ ಎಲ್ಲರೂ ತಲೆದೂಗಿ ಆಸ್ವಾದಿಸಿದರು. ಹೇಮಂತ್ ಅವರು ಪ್ರೀತ್ಸೆ... ಪ್ರೀತ್ಸೆ... ಹಾಡು ಹಾಡಿದಾಗ ಹುಚ್ಚೆದ್ದು ಕುಣಿಯದೇ ಇದ್ದ ಯುವಕರೇ ಅಲ್ಲಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.