ADVERTISEMENT

ರಾಜಾಶ್ರಯ ಕೊರತೆ-ಪರಂಪರೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 8:30 IST
Last Updated 18 ಫೆಬ್ರುವರಿ 2011, 8:30 IST

ಪುತ್ತೂರು: ‘ದೇಶದ ಧಾರ್ಮಿಕ ಸಂಸ್ಕೃತಿ ಸಂಪದ್ಭರಿತವಾಗಿದ್ದರೂ ಪ್ರಸ್ತುತ ರಾಜಾಶ್ರಯವಿಲ್ಲದೆ ಕ್ಷೀಣಿಸುತ್ತಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಧಾರ್ಮಿಕ ಪರಂಪರೆ ನಾಶವಾಗುತ್ತಿದೆ’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಈಶ್ವರಮಂಗಲದಲ್ಲಿ ಪಂಚಮುಖಿ ಆಂಜನೇಯ ಮಂದಿರದಲ್ಲಿ ಪ್ರತಿಷ್ಠಾಪಿಸಲು ಕಾರ್ಕಳದ ಕೃಷ್ಣಗಿರಿಯಿಂದ ಆಂಜನೇಯ ವಿಗ್ರಹವನ್ನು ಬುಧವಾರ ಈಶ್ವರಮಂಗಲಕ್ಕೆ ಬುಧವಾರ ತರಲಾಗಿದ್ದು, ಆ ಪ್ರಯುಕ್ತ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಧಾರ್ಮಿಕ ಪರಂಪರೆಗೆ ಮನ್ನಣೆ ನೀಡಬೇಕಾಗಿದ್ದ ಸರ್ಕಾರಗಳು ದಾಸ್ಯ ರಾಜಕೀಯದಲ್ಲಿ ನಿರತವಾಗಿವೆ ಎಂದು ಟೀಕಿಸಿದರು.

‘ನಾವು ಹಿಂದೂ ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದು, ಸ್ವಾಭಿಮಾನ ಬಿಟ್ಟು ಬದುಕುತ್ತಿದ್ದೇವೆ. ನಾವು ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ಅಂತರಂಗದಲ್ಲಿ ಧರ್ಮಶ್ರದ್ಧೆ ಜಾಗೃತಿಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ’ ಎಂದರು.ಆಂಜನೇಯ ಮಂದಿರದ ವಠಾದಲ್ಲಿ ನಿರ್ಮಿಸಲುದ್ದೇಶಿಸಿರುವ ಧರ್ಮ ಮಂದಿರಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಭೀಮೇಶ್ವರ ಜೋಷಿ ಶಿಲಾನ್ಯಾಸ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಂಟಾರು ರವೀಶ ತಂತ್ರಿ ಕೇರಳದ ಕಾಸರಗೋಡು ಕಾಶ್ಮೀರವಾಗಿತ್ತಿದ್ದು, ಹಿಂದೂ ಭಾವನೆಯ ಮೇಲೆ ಆಘಾತವಾಗದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದರು.

ಹಿಂದೂ ಮುಖಂಡ ಜಗದೀಶ್ ಶೇಣವ, ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಶಿಲ್ಪಿ ಗುಣವಂತೇಶ್ವರ ಭಟ್ ಅತಿಥಿಗಳಾಗಿದ್ದರು. ಧರ್ಮಶ್ರೀ ಪ್ರತಿಷ್ಠಾನ ಮಹಾ ಷೋಷಕ ಜಿ.ಕೆ.ಮಹಾಬಲೇಶ್ವರ ಭಟ್ ಕೊನೆತೋಟ, ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ, ಆಂಜನೇಯ ಭಕ್ತ ಸಮಿತಿಯ ಅಧ್ಯಕ್ಷ ಮುಂಡ್ಯ ಶ್ರೀಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಸರ್ವೋತ್ತಮ ಬೋರ್ಕರ್, ಪ್ರತಿಷ್ಠಾನದ ಕಾರ್ಯದರ್ಶಿ ಶಿವರಾಮ ಶರ್ಮ ಕತ್ರಿಬೈಲು, ಹೈಕೋರ್ಟ್ ವಕೀಲ ಎಸ್.ಕೆ. ಆಚಾರ್, ವೆಂಕಟೇಶ್ವರ ಶರ್ಮ ಕತ್ರಿಬೈಲು, ರವಿಕಿರಣ ಶೆಟ್ಟಿ ಬೆದ್ರಾಡಿ, ಕೆ.ಎಂ. ರಘುರಾಜ್ ಕೊನೆತೋಟ, ರವಿಕುಮಾರ್ ಕಾಟುರಾಯ, ಜತ್ತಪ್ಪ ಗೌಡ ಕೊಂಕಣಿಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.