ADVERTISEMENT

ವಸತಿ: ಆದಾಯ ಮಿತಿ ಹೆಚ್ಚಳ

ಅಧಿಕಾರಿಗಳ ಸಭೆ ಕರೆದು ವಿಸ್ತೃತ ಚರ್ಚೆ: ಸಚಿವ ಖಾದರ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 10:20 IST
Last Updated 10 ಜೂನ್ 2018, 10:20 IST

ಮಂಗಳೂರು: ವಸತಿ ಸೌಲಭ್ಯಗಳ ಪ್ರಯೋಜನ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪಬೇಕು. ಅದಕ್ಕಾಗಿ ಆದಾಯದ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸದ್ಯ ಇರುವ ವಾರ್ಷಿಕ ಕನಿಷ್ಠ ಆದಾಯ ಮಿತಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ಮಾಡಲಾಗುವುದು. ಈ ಕುರಿತು ಅಧಿಕಾರಿಗಳ ಸಭೆ ಕರೆದು, ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.

ವಾರ್ಷಿಕ ಆದಾಯ ₹32 ಸಾವಿರ ಇರುವ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ಒದಗಿಸಲಾಗುತ್ತಿದೆ. ಆದರೆ, ₹40 ಸಾವಿರ ಆದಾಯ ಇರುವ ಅನೇಕರು ಅರ್ಜಿ ಸಲ್ಲಿಸಿದ್ದರೂ, ಅವರು ಅನರ್ಹರಾಗುತ್ತಾರೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ವಸತಿ ಯೋಜನೆಯಡಿ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಯೋಜನೆಯ ಸರಳೀಕ ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.

ADVERTISEMENT

ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಇಲಾಖೆಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳ ಲಾಗುವುದು ಎಂದ ಅವರು, ಮಂಗಳೂರು ಮಹಾನಗರ ಪಾಲಿಕೆಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಸಂಗ್ರಹಿಸಿದ್ದು, ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದರು.

ಐಡಿಎಫ್‌ ಕೂಡ ಹೊಣೆ: ನಗರದಲ್ಲಿ ಮೇ 29 ರಂದು ಸಂಭವಿಸಿದ ಕೃತಕ ನೆರೆಗೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪಮೆಂಟ್‌ ಫೌಂಡೇಷನ್‌ (ಐಡಿಎಫ್‌) ಕೂಡ ಹೊಣೆಯಾಗುತ್ತದೆ ಎಂದು ಸಚಿವ ಖಾದರ್‌ ಹೇಳಿದರು.

ಮಹಾನಗರ ಪಾಲಿಕೆಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಐಡಿಎಫ್‌ ತಾಂತ್ರಿಕ ಸಲಹೆ ನೀಡುತ್ತಿದೆ. ಹೀಗಾಗಿ ಈ ಕೃತಕ ನೆರೆ ಸೃಷ್ಟಿಯಾಗಿರುವುದರ ಬಗ್ಗೆ ಐಡಿಎಫ್‌ ಕೂಡ ಮಹಾನಗರ ಪಾಲಿಕೆಗೆ ಉತ್ತರ ಕೊಡಬೇಕಾಗಿದೆ ಎಂದರು.

ರಾಜಕಾಲುವೆಯಲ್ಲಿ ಇರುವ ಲೋಪಗಳು, ಒತ್ತುವರಿ ಹಾಗೂ ಅನಧಿ ಕೃತ ಕಟ್ಟಡಗಳ ಕುರಿತು ಮಹಾನಗರ ಪಾಲಿಕೆಯೇ ಕ್ರಮ ಕೈಗೊಳ್ಳಬೇಕು ಎಂದ ಅವರು, ನಗರದ ಸಮಸ್ಯೆಗಳ ಕುರಿತು ಶಾಸಕರು, ಮೇಯರ್‌, ಎಂಜಿನಿಯರ್‌, ಪಾಲಿಕೆ ಸದಸ್ಯರ ಜತೆ ಸಮಾಲೋಚನೆ ನಡೆಸು ವುದಾಗಿ ತಿಳಿಸಿದರು.

ಮಂಗಳೂರಿನಲ್ಲಿ ಆಗಿರುವ ಹಾನಿಯ ಕುರಿತು ಮೇಯರ್‌ ಜತೆ ಚರ್ಚಿಸಿದ್ದು, ರಾಜ್ಯ ಸರ್ಕಾರ ಅಗತ್ಯ ಪರಿಹಾರ ಧನವನ್ನು ಬಿಡುಗಡೆ ಮಾಡಲಿದೆ. ಕಂದಾಯ ಇಲಾಖೆ ಹಾಗೂ ಮೇಯರ್‌ ಜತೆಗೆ ಒಂದು ಸುತ್ತಿನ ಸಭೆ ನಡೆಸಿ, ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆಯುವುದಾಗಿ ತಿಳಿಸಿದರು.

ಯತ್ನಾಳ ಹೇಳಿಕೆ ಖಂಡನೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಖಂಡಿಸಿದ ಸಚಿವ ಖಾದರ್‌, ಇಂತಹ ಹೇಳಿಕೆ ಅಸಾಂವಿಧಾನಿಕವಾಗಿದ್ದು, ಜನಪ್ರತಿನಿ ಧಿಗಳು ತಮ್ಮ ಜವಾಬ್ದಾರಿ ಯನ್ನು ಅರಿತು ಮಾತನಾ ಡಬೇಕು ಎಂದರು.

ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರು, ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಚುನಾಯಿತ ಜನಪ್ರತಿನಿಧಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಜನರು, ನೇರವಾಗಿ ಸರ್ಕಾರವನ್ನು ಸಂಪರ್ಕಿಸುತ್ತಾರೆ ಎಂದರು.

‘ರಾಜಕೀಯ ಮಾಡಲ್ಲ’

ಅಭಿವೃದ್ಧಿಯ ವಿಷಯದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ಪಕ್ಷಭೇದ ಮರೆತು ನಗರವೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಖಾದರ್‌ ಹೇಳಿದರು. ಜಿಲ್ಲೆಯಲ್ಲಿ ಏಳು ಜನ ಬಿಜೆಪಿ ಶಾಸಕರಿದ್ದು, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಅವರ ಸಲಹೆಯನ್ನೂ ಪಡೆಯುತ್ತೇನೆ ಎಂದರು.

ಜಿಲ್ಲೆಯಲ್ಲಿ ಏಳು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಅವರೇನೂ ನಮ್ಮ ಶತ್ರುಗಳಲ್ಲ. ಅವರೆಲ್ಲರ ಸಲಹೆಯನ್ನು ಪಡೆಯುತ್ತೇನೆ.
ಯು.ಟಿ. ಖಾದರ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.