ಮೂಡುಬಿದಿರೆ: ನಾಲ್ಕು ದಿನಗಳಲ್ಲಿ ಲಕ್ಷಾಂತರ ಮಂದಿಗೆ ಸಾಹಿತ್ಯ, ಸಂಸ್ಕೃತಿಯ ರಸದೌತಣ ನೀಡಿದ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಸಂಭ್ರಮಕ್ಕೆ ಭಾನುವಾರ ತೆರೆಬಿದ್ದಿದೆ. ಸಮ್ಮೇಳನದಲ್ಲಿ ನಾಲ್ಕು ದಿನ ಮಳಿಗೆಗಳನ್ನು ತೆರೆದು ವ್ಯವಹಾರ ನಡೆಸಿದ ವ್ಯಾಪಾರಿಗಳು ಸೋಮವಾರ ತಮ್ಮ ಸರಕು ಸಾಮಾನುಗಳನ್ನು ತುಂಬಿಸಿಕೊಂಡು ಊರಿಗೆ ಹೊರಡುವ ಸಿದ್ಧತೆಯಲ್ಲಿದ್ದುದು ಕಂಡುಬಂತು.
ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಜ್ಯದ ವಿವಿಧೆಡೆಯ ಸುಮಾರು 600 ಮಳಿಗೆಗಳು ಒಂದೆಡೆಯಾದರೆ, ದೇಶದ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಸುಮಾರು 500 ಮಳಿಗೆಗಳನ್ನು ಮತ್ತೊಂದೆಡೆ ಇದ್ದವು. ನಾಲ್ಕು ದಿನ ವ್ಯಾಪಾರ ಮುಗಿಸಿದ ವ್ಯಾಪಾರಿಗಳು ತಮ್ಮ ಮಳಿಗೆಗಳ ಉಳಿದ ಸಾಮಗ್ರಿಗಳನ್ನು ವಾಹನದಲ್ಲಿ ತುಂಬಿಸಿ ಊರಿಗೆ ಮರಳಲು ಸಿದ್ಧತೆಯಲ್ಲಿದ್ದಾರೆ.
ಫಲಪುಷ್ಪ ಮಾರಾಟಕ್ಕೆ ಭರ್ಜರಿ ವ್ಯಾಪಾರ: ಸಮ್ಮೇಳನದ ನಾಲ್ಕು ದಿನಗಳಲ್ಲಿ ಭರ್ಜರಿ ವ್ಯಾಪಾರ ಆಗಿರುವುದು ಫಲಪುಷ್ಪ ಮಾರಾಟ ವ್ಯಾಪಾರಿಗಳಿಗೆ. ಕೃಷಿ ಸಮ್ಮೇಳನದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಪುಷ್ಟ ಮಾರಾಟ ಮಳಿಗೆಯೊಂದಕ್ಕೆ ನಾಲ್ಕು ದಿನಗಳಲ್ಲಿ ರೂ 4 ಲಕ್ಷ ವ್ಯಾಪಾರ ಆಗಿದೆ. ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸುವ ಕಲ್ಲಂಗಡಿ ವ್ಯಾಪಾರ ಎರಡನೇ ಸ್ಥಾನ ಪಡೆದಿದೆ. ಕಲ್ಲಂಗಡಿಯ ಒಟ್ಟು 8 ಮಳಿಗೆಗಳಿದ್ದು, ವಿರಾಸತ್ ಆವರಣದಲ್ಲಿ ಕುಂಞಿಮೋನು ಅವರ ಕಲ್ಲಂಗಡಿ ಸ್ಟಾಲ್ನಲ್ಲಿ ₨ 2 ಲಕ್ಷ ವ್ಯಾಪಾರ ನಡೆದಿದೆ.
ಸಮ್ಮೇಳನ ಮುಗಿದರೂ ನಿಲ್ಲದ ಜನ: ನುಡಿಸಿರಿ ವಿರಾಸತ್ ಸಮ್ಮೇಳನ ಮುಗಿದರೂ ಸೋಮವಾರವೂ ಜನ ಇಲ್ಲಿಗೆ ಬಂದು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಕುಂದಾಪುರ ಹೆಮ್ಮಾಡಿಯ ವಿದ್ಯಾರ್ಥಿಗಳು ಸೋಮವಾರ ಸಂಜೆ ವಿದ್ಯಾಗಿರಿ ಕ್ಯಾಂಪಸ್ಗೆ ಬಂದು ಇಲ್ಲಿನ ಪರಿಸರ ವೀಕ್ಷಿಸಿದರು.
ಸಮ್ಮೇಳನದಲ್ಲಿ ಜನರ ಆಕರ್ಷಣೆಯ ಕೇಂದ್ರವಾಗಿದ್ದ ಪುಷ್ಪಾಲಂಕೃತ ಎರಡು ಆನೆಗಳು ಸೋಮವಾರದವರೆಗೂ ಹಾಗೆಯೇ ಇದ್ದವು. ಕೆಲವರು ಕುತೂಹಲದಿಂದ ಅದರ ಹೂಗಳನ್ನು ಕಿತ್ತು ನೋಡುತ್ತಿದ್ದರು. ಭತ್ತದ ತೆನೆಯ ಮನೆ ಮತ್ತು ಜೋಳದ ಮನೆ ಸೋಮವಾರ ಸಂಜೆಯೊಳಗೆ ತೆರವು ಮಾಡಿ ಸ್ವಚ್ಚಗೊಳಿಸಲಾಗಿದೆ. ಸಮ್ಮೇಳನದ 9 ವೇದಿಕೆಗಳ ಚಪ್ಪರಗಳನ್ನು ಇನ್ನಷ್ಟೇ ತೆಗೆಯಬೇಕಾಗಿದೆ.
ಸಮ್ಮೇಳನಕ್ಕೆ ಮುನ್ನ ವೇದಿಕೆ, ವಿದ್ಯಾಗಿರಿ ಆವರಣವನ್ನು ಅಲಂಕಾರಗೊಳಿಸಲು ಅಹರ್ನಿಶಿ ದುಡಿಯುತ್ತಿದ್ದಷ್ಟು ಕಾರ್ಮಿಕರ ಸಂಖ್ಯೆ ಸೋಮವಾರ ಕಂಡು ಬಂದಿಲ್ಲ, ಚಪ್ಪರಗಳನ್ನು ತೆರವುಗೊಳಿಸಿ ಅಲ್ಲಿನ ಸರಕು, ಸಾಮಾನುಗಳನ್ನು ಕೊಂಡೊಯ್ದು ವಿದ್ಯಾಗಿರಿಯನ್ನು ಹಿಂದಿನ ಸ್ಥಿತಿಗೆ ತರಲು ಕನಿಷ್ಠ ಎರಡು ವಾರವಾದರೂ ಬೇಕಾದೀತು ಎಂಬ ಮಾತು ಕೇಳಿಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.