ADVERTISEMENT

ವಿದ್ಯಾರ್ಥಿಗಳಿಗೆ ಬತ್ತದ ನಾಟಿ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:58 IST
Last Updated 2 ಜುಲೈ 2013, 5:58 IST

ಉಳ್ಳಾಲ: ಆಧುನಿಕ ಯುಗದಲ್ಲಿ ಸಾಫ್ಟ್‌ವೇರ್, ಕಂಪ್ಯೂಟರ್ ಹಾಗೂ ಎಷ್ಟೇ ದೊಡ್ಡ ವಿದ್ಯೆ, ಉದ್ಯೋಗ, ವೇತನ ಹೊಂದಿದವರಿಗೂ ಜೀವಿಸಲು ಅನ್ನಾಹಾರದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ನಾಶವಾಗುತ್ತಿದ್ದು ಇದರ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕಿದೆ ಎಂದು ನರಿಂಗಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಪ್ರಭಾಕರ್ ಹೇಳಿದರು.

ಹರೇಕಳ ಶ್ರಿ ರಾಮಕೃಷ್ಣ ಪ್ರೌಢ ಶಾಲೆಯ ಸೌಜನ್ಯ ಸ್ಕೌಟ್ ದಳ, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ ದಳ, ಬಾಲ ಗಂಗಾಧರ ತಿಲಕ ಸ್ಕೌಟ್ ದಳ ಹಾಗೂ ಉಳ್ಳಾಲ ವಲಯದ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಭಾನುವಾರ ಹರೇಕಳದ ಮುಲಾರದಲ್ಲಿ ನಡೆದ `ಮುಂಗಾರು ಮಳೆಯಲ್ಲಿ ಬತ್ತದ ನಾಟಿ' ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳಗಂಗೋತ್ರಿ ಜೇಸಿ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಹಿಂದಿನ ತಲೆಮಾರಿನವರು ಅನುಸರಿಸಿದ್ದ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಹಾಗೂ ಪತ್ರಕರ್ತ ಅನ್ಸಾರ್ ಇನೋಳಿ ಮಾತನಾಡಿದರು. ಪ್ರೌಢ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಶ್ರಿ ನಾರಾಯಣ ಗುರು ಕೊಣಾಜೆ ಗ್ರಾಮ ಸಮಿತಿಯ ಅಧ್ಯಕ್ಷ ಲೋಕೇಶ್ ತಚ್ಚಿಲ, ಕೊಣಾಜೆ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ, ಹಿರಿಯ ಕೃಷಿಕ ನಾರಾಯಣ ನಾಯ್ಕ, ಲಯನ್ಸ್ ಕ್ಲಬ್ ಮಂಗಳ ಗಂಗೋತ್ರಿಯ ಅಧ್ಯಕ್ಷೆ ಸ್ವರ್ಣಲತಾ ರೈ ಉಪಸ್ಥಿತರಿದ್ದರು. ನವೀನ್ ಸ್ವಾಗತಿಸಿದರು. ತ್ಯಾಗಂ ಹರೇಕಳ ವಂದಿಸಿದರು.

ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್‌ನ ಮಾಜಿ ಕೋಶಾಧಿಕಾರಿ ಪ್ರಸಾದ್ ರೈ ಕಲ್ಲಿಮಾರ್ ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಸೆಸ್ ಜಯಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿ.ವಿ. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಪ್ರಶಾಂತ್ ನಾಯ್ಕ, ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರವೀಂದ್ರ ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.