ADVERTISEMENT

‘ವಿದ್ಯಾರ್ಥಿ ಜೀವನ ವ್ಯರ್ಥ ಕಳೆಯಬೇಡಿ’

ಯುವವಾಹಿನಿಯಿಂದ ‘ಚತುರ್ಮುಖ’ ಸಂವಾದ, ಚಿಂತಕರ ಚಾವಡಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 11:11 IST
Last Updated 30 ನವೆಂಬರ್ 2017, 11:11 IST
ಮಂಗಳೂರಿನ ಪುರಭವನದಲ್ಲಿ ಬುಧವಾರ ಯುವವಾಹಿನಿಯಿಂದ ಆಯೋಜಿಸಿದ್ದ ಚತುರ್ಮುಖ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ ಮಾತನಾಡಿದರು. ಪ್ರಜಾವಾಣಿ ಚಿತ್ರ
ಮಂಗಳೂರಿನ ಪುರಭವನದಲ್ಲಿ ಬುಧವಾರ ಯುವವಾಹಿನಿಯಿಂದ ಆಯೋಜಿಸಿದ್ದ ಚತುರ್ಮುಖ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು:  ‘ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ಈ ಹಂತದಲ್ಲಿ ಜೀವನದ ಯಶಸ್ಸಿಗೆ ಭದ್ರ ಬುನಾದಿ ಹಾಕಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಚತುರ್ಮುಖ’ ಯುವ ಮನಸುಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದಾ ವಿದ್ಯಾರ್ಥಿಯಾಗಿರುವ ಹಂಬಲ ವ್ಯಕ್ತಪಡಿಸಿದರು.

ಬದುಕು ರೂಪಿಸುವಾಗ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು. ಅಡ್ಡದಾರಿಗಳನ್ನು ಹಿಡಿಯಲು ಪ್ರಯತ್ನಿಸದೇ, ಒಳ್ಳೆಯ ಮಾರ್ಗದಲ್ಲಿ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಉತ್ತುಂಗಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಬದುಕನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸುಳ್ಳಿನಿಂದ ಕ್ಷಣಿಕ ಸುಖ ಸಿಕ್ಕರೂ, ಜೀವನಪೂರ್ತಿ ನೋವು ಅನುಭವಿಸಬೇಕಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನೂ ಎಚ್ಚರಿಕೆಯಿಂದ ಕಳೆಯಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತ ಆಗುವುದು ಬೇಡ. ಒಳ್ಳೆಯ ವಿಚಾರಗಳನ್ನು ಕಲಿತುಕೊಳ್ಳಬೇಕು. ಜತೆಗೆ ಆಟೋಟಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಒಳ್ಳೆಯ ಹವ್ಯಾಸ ಗಳನ್ನು ರೂಢಿಸಿಕೊಳ್ಳಬೇಕು. ಜೀವನ ದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಉದಯವಾಣಿ ಚೀಫ್‌ ಬ್ಯೂರೊ ಮನೋಹರ ಪ್ರಸಾದ್‌ ಅವರು ಬಾಲ್ಯದ ಸೂಕ್ಷ್ಮಗಳನ್ನು ನವಿರಾಗಿ ಕಟ್ಟಿಕೊಟ್ಟರು. ಕೌಟುಂಬಿಕ ಚೌಕಟ್ಟನ್ನು ವಿವರಿಸಿದರು.

ನ್ಯಾಯ ವ್ಯವಸ್ಥೆಯ ಕುರಿತು ಹಿರಿಯ ವಕೀಲ ಟಿ. ನಾರಾಯಣ ಪೂಜಾರಿ, ಲೋಕಾಯುಕ್ತ ಅಭಿಯೋಜಕ ರಾಜೇಶ್‌ ಕೆ.ಎಸ್‌.ಎನ್‌., ಮನಃಶಾಸ್ತ್ರದ ಕುರಿತು ಮನಸ್ವಿನಿ ಸಂಸ್ಥೆಯ ಡಾ. ರವೀಶ್‌ ತುಂಗಾ, ಮನೋವೈದ್ಯೆ ಡಾ. ಅರುಣಾ ಯಡಿಯಾಳ, ಕಾನೂನಿನ ವಿಷಯವಾಗಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ರವೀಶ್‌, ಮಂಜುನಾಥ್‌, ಲೇಖನಿಯ ಕುರಿತು ಹಿರಿಯ ಪತ್ರಕರ್ತರಾದ ಬಾಲಕೃಷ್ಣ ಪುತ್ತಿಗೆ, ಪಿ.ಬಿ. ಹರೀಶ್‌ ರೈ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಯುವವಾಹಿನಿ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಸುವರ್ಣ, ಉಪಾಧ್ಯಕ್ಷ ನರೇಶ್‌ಕುಮಾರ್‌ ಸಸಿಹಿತ್ಲು ವೇದಿಕೆಯಲ್ಲಿದ್ದರು. ಯುವವಾಹಿನಿ ಅಧ್ಯಕ್ಷ ಯಶವಂತ ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಜಯಂತ್‌ ನಡುಬೈಲ್‌ ವಂದಿಸಿದರು.

*
ವೃತ್ತಿ ನಿರ್ವಹಣೆ ಮಾಡುವುದು ಉಪ ಜೀವನಕ್ಕಾಗಿ. ಅದಕ್ಕಿಂತಲೂ ಒಳ್ಳೆಯ ವ್ಯಕ್ತಿತ್ವದ ಮೂಲಕ ಸುಂದರ ಜೀವನವನ್ನು ಕಟ್ಟಿಕೊಳ್ಳುವುದು ಅವಶ್ಯಕ.
-ಕೆ.ಎಸ್‌. ಬೀಳ, ಗಿಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.