ADVERTISEMENT

ವಿವಾಹ ಕುಟುಂಬಗಳನ್ನು ಬೆಸೆಯುವ ಸಂಬಂಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 8:46 IST
Last Updated 16 ಅಕ್ಟೋಬರ್ 2017, 8:46 IST

ಪುತ್ತೂರು: ವಿವಾಹ ಕೇವಲ ಭೋಗಕ್ಕಾಗಿ ಅಲ್ಲ, ಎರಡು ಜೀವಗಳನ್ನು ಬೆಸೆಯುವ ಈ ಸಂಬಂಧವು ಕುಟುಂಬಗಳನ್ನು ಜೋಡಿಸುತ್ತದೆ ಎಂದು ಅಖಿಲ ಭಾರತೀಯ ಕುಟುಂಬ ಪ್ರಭೋದನ್ ಪ್ರಮುಖ್ ಸು.ರಾಮಣ್ಣ ಅವರು ಹೇಳಿದರು.

ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ 'ನವದಂಪತಿ ಸಮಾವೇಶ'ದಲ್ಲಿ ಅವರು ಮಾತನಾಡಿ, ‘ದೈವಾನುಗ್ರಹದಿಂದ ಪಡೆದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ತಂದೆ ತಾಯಿಗಳಿಗಿರಬೇಕು ಎಂದರು.

ಮಕ್ಕಳಲ್ಲಿ ಸಮಷ್ಠಿಯ ಬಗ್ಗೆ ಅಂದರೆ, ಸಮಸ್ತ ಸೃಷ್ಟಿ, ಜಗತ್ತು ವಿಶ್ವವನ್ನೇ ಪ್ರೀತಿಸಿ ಗೌರವಿಸುವ ಸಂಸ್ಕೃತಿ ಬೆಳೆಸಿದಾಗ 'ವಸುದೈವ ಕುಟುಂಬಕಂ' ಮಾತು ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಹಿರಿಯ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ನಿವೃತ್ತ ಅಧ್ಯಾಪಕ ಮಜಿ ನಾರಾಯಣ ಭಟ್ ದಂಪತಿ ಹಾಗೂ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಗುರುವ ದಂಪತಿ ಅವರು ತಮ್ಮ ದಾಂಪತ್ಯ ಜೀವನದ ಸಿಹಿ ಅನುಭವಗಳನ್ನು ಹಂಚಿಕೊಂಡರು.

ನವ ವಿವಾಹಿತರೊಂದಿಗೆ ಆಪ್ತ ಸಂವಾದ ನಡೆಸಿದ ಡಾ. ಸುಧಾ ರಾವ್ ಮತ್ತು ಸತೀಶ್ ಅವರು ಸಂಸ್ಕಾರಯುತ ಸುಖೀ ಜೀವನಕ್ಕೆ ಬೇಕಾದ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದರು.

ಶಾಲಾ ಸಂಚಾಲಕ ವಿನೋದ್ ಕುಮಾರ್ ರೈ ಇದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ್ ನಾಯಕ್ ಅವರು ಸ್ವಾಗತಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಸಜಿತ್ ಕುಮಾರ್ ವಂದಿಸಿದರು. ಉಮಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಚೆಂಡೆ, ವಾದ್ಯಗಳೊಂದಿಗೆ ದಂಪತಿಯನ್ನು ಸ್ವಾಗತಿಸಿ ಕಾರ್ಯಕ್ರಮವು ಉದ್ಫಾಟನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.