ಮಂಗಳೂರು: ‘ಮಂಗಳೂರು ವಿಶೇಷ ಆರ್ಥಿಕ ವಲಯ ಎರಡನೇ ಹಂತದ ವಿಸ್ತರಣೆಗೆ ನನ್ನ ಪ್ರಬಲ ವಿರೋಧವಿದೆ. ನಮ್ಮ ಪಕ್ಷವೂ ವಿರೋಧ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿನೋಟಿಫೈ ಮಾಡುವ ಭರವಸೆಯನ್ನೂ ನೀಡಿದ್ದಾರೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದರು.
ನಗರದ ಪತ್ರಕರ್ತರ ಅಧ್ಯಯನ ಕೇಂದ್ರ ಗುರುವಾರ ಏರ್ಪಡಿಸಿದ್ದ ‘ಎಂಎಸ್ಇಝೆಡ್: ಜನಪ್ರತಿನಿಧಿಗಳೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೊದಲ ಹಂತದ ಭೂಸ್ವಾಧೀನ ಸಂದರ್ಭದಲ್ಲಿ ನೀಡಿದ ಭರವಸೆಗಳು ಎಂಎಸ್ಇಝೆಡ್ ಕಡೆಯಿಂದ ಈಡೇರಿಯೇ ಇಲ್ಲ. ಜತೆಗೆ ಮೊದಲ ಹಂತದಲ್ಲಿ ನಿರೀಕ್ಷಿಸಿದಷ್ಟು ಕಂಪೆನಿಗಳೂ ಅಲ್ಲಿಗೆ ಬಂದಿಲ್ಲ. ಈ ಬೃಹತ್ ಯೋಜನೆಯಿಂದಾಗಿ ಭೂಮಿ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳ ನಿರುದ್ಯೋಗಿಗಳಿಗೆ ಮೊದಲು ಭರವಸೆ ನೀಡಿದಂತೆ ಉದ್ಯೋಗವನ್ನೂ ನೀಡಲಾಗಿಲ್ಲ. ಹೀಗಾಗಿ ಎರಡನೇ ಹಂತದ ವಿಸ್ತರಣೆಯನ್ನು ನಾನು ಬಲವಾಗಿ ವಿರೋಧಿಸುವೆ ಎಂದರು.
ಎಂಎಸ್ಇಝೆಡ್ ಪ್ರದೇಶ ವ್ಯಾಪ್ತಿಗೆ ಸೇರಿದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಮಾತನಾಡಿ, ಹೊಸ ಉದ್ಯಮಗಳು ನೆಲೆಗೊಳ್ಳುವಾಗಿ ಭೂಸ್ವಾಧೀನ ಸಹಜ. ಆದರೆ, ಈಗಿನ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಜಿಲ್ಲಾಡಳಿತ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಕುಡುಬಿ ಜನಾಂಗದ ಪ್ರತಿನಿಧಿಗಳು, ಜಿಲ್ಲಾ ಪಂಚಾಯಿತಿ ಬಜ್ಪೆ ಕ್ಷೇತ್ರ ಸದಸ್ಯ ರಿತೇಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.