ಸುಳ್ಯ: ‘ನಾನು ಸತ್ಯ ಹೇಳಿದ ಕಾರಣದಿಂದ ನನ್ನ ಮೇಲೆ ಕೇಸು ಮಾಡಿದ್ದಾರೆ. ಕೇಸಲ್ಲ, ಮರಣದಂಡನೆಗೆ ಗುರಿ ಮಾಡಿದರೂ, ಚುನಾವಣೆಯ ಸ್ಪರ್ಧೆಯಿಂದ ನನ್ನನ್ನು ಅನರ್ಹಗೊಳಿಸಿದರೂ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ’ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಜನರ ಬಳಿಗೆ ಕಾಂಗ್ರೆಸ್ –ಸಾಮರಸ್ಯದ ನಡಿಗೆ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಬೆಳ್ಳಾರೆಯಿಂದ ಆರಂಭಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಮೋದಿಯವರ ಪತ್ನಿಯ ವಿವರವನ್ನು ಬಹಿರಂಗ ಪಡಿಸುವಂತೆ ನಾನು ಕೇಳಿದ್ದೆ. ಮದುವೆಯಾಗಿದ್ದು ಹೌದಾದರೆ ಬಹಿರಂಗ ಪಡಿಸಲು ಹಿಂಜರಿಕೆ ಏಕೆ? ಮಹಿಳೆಗೆ ಗೌರವ ಕೊಡುವಂತೆ ಕೇಳುವುದು ತಪ್ಪೇ? ಚುನಾವಣೆಯ ಸ್ಪರ್ಧೆಯ ಸಂದರ್ಭದಲ್ಲಿ ಪ್ರಮಾಣಪತ್ರದಲ್ಲೂ ಅದನ್ನು ಪ್ರಸ್ತಾಪಿಸಬೇಕು. ಅದನ್ನು ಮಾಡಿಲ್ಲ ಏಕೆ? ಹಾಗಾಗಿ ಈ ಪ್ರಶ್ನೆಗಳನ್ನು ಎತ್ತಿರುವುದರಿಂದ ಆಯೋಗ ಪ್ರಕರಣ ದಾಖಲಿಸಿದೆ.
ಬೇಕಿದ್ದರೆ ಅವರೇ ಗುಜರಾತ್ಗೆ ತೆರಳಿ ಪರಿಶೀಲಿಸಲಿ. ಯಾವ ಕೇಸು ಮಾಡಿದರೂ ಮಾತಿಗೆ ತಪ್ಪುವುದಿಲ್ಲ ಎಂದು ಪೂಜಾರಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ಶಿಫಾರಸು ಮಾಡುವುದಾಗಿ ಹೇಳಿದರು. ನಳಿನ್ ಕುಮಾರ್ ಕಟೀಲ್ ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಖರ್ಚು ಮಾಡುವುದು ದೊಡ್ಡ ಸಂಗತಿಯೇನಲ್ಲ. ಜಿಲ್ಲಾಧಿಕಾರಿಗಳಿಗೆ ಒಂದು ಪಟ್ಟಿ ನೀಡಿದರೆ ಅವರೂ ಅದನ್ನು ಮಾಡುತ್ತಾರೆ. ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಹೇಳಿದರು.
ಪಾದಯಾತ್ರೆಯೊಂದಿಗೆ ರಮಾನಾಥ ರೈ ಹಾಗೂ ಜನಾರ್ದನ ಪೂಜಾರಿ ಹೆಜ್ಜೆ ಹಾಕಿದರು. ಚೆಂಡೆ –ವಾದ್ಯಮೇಳಗಳೊಂದಿಗೆ ನಡೆದ ಪಾದಯಾತ್ರೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.
ಸಂಜೆ ಸುಳ್ಯದಲ್ಲಿ ಪಾದಯಾತ್ರೆ ಸಮಾರೋಪಗೊಂಡಿತು. ಜನಾರ್ದನ ಪೂಜಾರಿ, ಕಣಚೂರು ಮೋನು, ಭರತ್ ಮುಂಡೋಡಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಡಾ.ರಘು, ಪಿ.ಪಿ.ವರ್ಗೀಸ್, ಪಡ್ಡಂಬೈಲು ವೆಂಕಟ್ರಮಣ ಗೌಡ, ಐ.ಕುಂಞಿಪಳ್ಳಿ, ಕುಮಾರಿ ವಾಸುದೇವನ್, ಸರಸ್ವತಿ ಕಾಮತ್, ಕಿರಣ್ ಬುಡ್ಲೆಗುತ್ತು, ಪಿ.ಎಸ್.ಗಂಗಾಧರ್, ರಾಜೀವಿ ರೈ, ದಿವ್ಯಪ್ರಭಾ ಚಿಲ್ತಡ್ಕ, ಶ್ರೀರಾಂ ಪಾಟಾಜೆ, ಕೆ.ಗೋಕುಲ್ದಾಸ್, ಪವಾಝ್, ಅರ್ಷಾದ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.